ಬೆಂಗಳೂರು: ಕೊರೋನಾ ಸೋಂಕಿಗೊಳಗಾಗಿರುವ ರಾಜ್ಯದ ಅನೇಕ ಕ್ಯಾನ್ಸರ್ ರೋಗಿಗಳು ಯಾವುದೇ ತೊಂದರೆಗಳಿಲ್ಲದೆಯೇ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ.
ಕಳೆದ ಎರಡು ತಿಂಗಳುಗಳಿಂದ ಫೋರ್ಟಿಸ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞರು ಕೊರೋನಾ ಸೋಂಕಿಗೊಳಗಾಗಿರುವ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯ ಕುರಿತು ಚರ್ಚೆ ನಡೆಸಿದ್ದಾರೆ. ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಸ್ತುತ ನಾಲ್ವರು ಕ್ಯಾನ್ಸರ್ ರೋಗಿಗಳು ಸೋಂಕಿಗೊಳಗಾಗಿದ್ದು, ಇದರಲ್ಲಿ ಮೂವರು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಒಬ್ಬರು 35 ವರ್ಷ ವಯಸ್ಸಿನವರಾಗಿದ್ದಾರೆ.
ಸೋಂಕು ಪೀಡಿದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ವೇಳೆ ಕೀಮೋಥೆರಪಿ ಮಾರ್ಪಡಿಸುವ ಕುರಿತುಂತೆ ಕೂಡ ಚರ್ಚೆ ನಡೆಸಿದ್ದೇವೆ. ಆದರೆ, ಸೋಂಕಿತರಿಗೆ ಕೀಮೋಥೆರಲಿ ಮುಂದುವರಿಸಿದ ಬಳಿಕವೂ ವೈದ್ಯಕೀಯ ವರದಿ ಕ್ಯಾನ್ಸರ್ ಇಲ್ಲದ ರೋಗಿಗಳಂತೆಯೇ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯ ವಿವೇಕ್ ಬೆಳತೂರ್ ಅವರು ಹೇಳಿದ್ದಾರೆ.
ಪ್ರತಿಯೊಬ್ಬ ರೋಗಿಗೂ ವಿಭಿನ್ನ ರೀತಿಯ ಕ್ಯಾನ್ಸರ್ ಇದೆ. ಶ್ವಾಸಕೋಶ ಕ್ಯಾನ್ಸರ್, ಲಿಂಫೋಮಾ, ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಗೊಳಗಾಗಿದ್ದಾರೆ. ಕೀಮೋಥೆರಪಿ ಮತ್ತು ಕೋವಿಡ್ -19 ಎರಡೂ ರೋಗಿಯ ಸ್ಥಿತಿ ಹದಗೆಡಲು ಕಾರಣವಾಗಬಹುದು ಎಂದು ತಿಳಿಯಲಾಗಿತ್ತು. ಕ್ಯಾನ್ಸರ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಆದರೀಗ ಸೋಂಕು ಪೀಡಿದ ಕ್ಯಾನ್ಸರ್ ರೋಗಿಗಳೂ ಕೂಡ ಸೋಂಕಿನಿಂದ ಸಾಮಾನ್ಯ ವ್ಯಕ್ತಿಗಳಂತೆ ಚೇತರಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೂ ಚೇತರಿಕೆ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
ಇದೇ ರೀತಿಯ ಚರ್ಚೆಯನ್ನು ವಿಕ್ರಮ್ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ತಜ್ಞರೂ ಕೂಡ ನಡೆಸಿದ್ದಾರೆ. ಅಭಿದಮನಿ ಚಿಕಿತ್ಸೆಯನ್ನು ಓರಲ್ ಕೀಮೋ ಎಂದು ಬದಲಾಯಿಸಬೇಕೇ ಮತ್ತು ವಾರಕ್ಕೆ ಒಂದು ಬಾರಿ, ಮೂರು ವಾರಗಳಿಗೊಮ್ಮೆ ಮಾಡಬೇಕೇ ಎಂಬುದರ ಕುರಿತು ಚರ್ಚೆ ನಡೆಸಿದ್ದೇವೆಂದು ವಿಕ್ರಮ್ ಆಸ್ಪತ್ರೆಯ ಡಾ.ನಿತಿ ರೈಜಾಡಾ ಅವಕು ಹೇಳಿದ್ದಾರೆ.
ಆದರೆ, ಇಲ್ಲಿಯೂ ಸಾಮಾನ್ಯ ಸೋಂಕಿತರಂತೆಯೇ ಕ್ಯಾನ್ಸರ್ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿರುವ ಬೆಳವಣಿಗೆಗಳು ಕಂಡು ಬಂದಿವೆ. “ಕೊರೋನಾ ಪೀಡಿದ ಕ್ಯಾನ್ಸರ್ ರೋಗಿಗಳಿಗೆ ಇಮ್ಯುನೊಥೆರಪಿಗಳು ನಡೆಸಿರುವುದು ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಅಧ್ಯಯನಗಳು ತಿಳಿಸಿವೆ, ಆದರೆ, ನಾವು ಬೋನ್ ಮಾರೋ ಟ್ರಾನ್ಸ್'ಪ್ಲಾಂಟ್ ಚಿಕಿತ್ಸೆಯನ್ನು ನಿಲ್ಲಿಸಿದ್ದೇವೆ. ಇದೀಗ ಮತ್ತೆ ಪುನರಾರಂಭಿಸುತ್ತೇವೆಂದು ತಿಳಿಸಿದ್ದಾರೆ.
Advertisement