ಮೈಸೂರು: ರಾಜ್ಯದಲ್ಲಿ ಬೆಂಗಳೂರು ಬಳಿಕ ಕೊರೋನಾ ವೈರಸ್ ಆರ್ಭಟಕ್ಕೆ ಹೆಚ್ಚಾಗಿ ತುತ್ತಾಗಿರುವ ಮೈಸೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ 200 ಬೆಡ್ ಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ, ತಜ್ಞ ವೈದ್ಯರು, ವೈದ್ಯರು, ನರ್ಸ್ಗಳ ಜೊತೆ ಮಾತುಕತೆ ನಡೆಸಿದ ಅವರು, ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಹಾಸಿಗೆಗಳ ಸಾಮರ್ಥ್ಯದ ಬಗ್ಗೆ ಮಾಹಿತಿ ಪಡೆದರು.
ಮೈಸೂರು ನಗರದಲ್ಲಿ ಸದ್ಯ ಹೆಚ್ಚು ಕೊರೊನಾ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳು ಹಾಗೂ ವೈದ್ಯರ ಸಂಖ್ಯೆ ನಿಯೋಜನೆ ಹೆಚ್ಚಿಸಬೇಕಾಗಿದೆ ಎಂದು ಡಿಸಿ ಸೂಚನೆ ನೀಡಿದರು. ಇದೇ ವೇಳೆ ಕೆ.ಆರ್. ಆಸ್ಪತ್ರೆಯಲ್ಲಿ ಈಗ 178 ಬೆಡ್ ಇವೆ. ಇನ್ನೂ 200 ಬೆಡ್ಗಳನ್ನು ಕೋವಿಡ್ ಚಿಕಿತ್ಸೆಗೆ ಹೆಚ್ಚಿಸುವಂತೆ ಹಾಗೂ ಟ್ರಾಮಾ ಕೇರ್ ಸೆಂಟರ್ನಲ್ಲೂ ಕೋವಿಡ್ ಚಿಕಿತ್ಸೆಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.
ಅಂತೆಯೇ ಈಗಾಗಲೇ ಆಗಿರುವ ಪ್ರಕ್ರಿಯೆಯನ್ನೂ ಬೇಗ ಪೂರ್ಣಗೊಳಿಸುವಂತೆ ತಿಳಿಸಿದರು. ಸ್ನಾತಕೋತ್ತರ ಪದವಿಯ ಕೊನೆಯ ವರ್ಷದಲ್ಲಿ 154 ವಿದ್ಯಾರ್ಥಿಗಳು ಇದ್ದಾರೆ. ಅವರನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಸೂಕ್ತ ತರಬೇತಿ ನೀಡುವ ಬಗ್ಗೆ ಆಲೋಚಿಸುವಂತೆ ತಿಳಿಸಿದರು. ನಂತರ ಕೆ.ಆರ್. ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಕ್ಸಿಜನ್ ಸಿಲಿಂಡರ್ ಹಾಗೂ ವೆಂಟಿಲೇಟರ್ ಗಳನ್ನು ಪರಿಶೀಲಿಸಿದರು.
ಆಸ್ಪತ್ರೆ ಆವರಣದಲ್ಲೇ ನಿರ್ಮಾಣವಾಗುತ್ತಿರುವ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಪೂರ್ಣಗೊಳ್ಳುವಿಕೆ ತಡವಾಗುತ್ತಿದ್ದು, ಇದರಿಂದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ಈ ಬಗ್ಗೆ ಮಾತನಾಡಿದ ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥ ಡಾ. ಸಿಪಿ ನಾಗರಾಜ್ ಅವರು, 'ಆಮ್ಲಜನಕ ಟ್ಯಾಂಕ್ ಮತ್ತು ಮ್ಯಾನಿಫೋಲ್ಡ್ ಹೊರತುಪಡಿಸಿ ಘಟಕದ ಎಲ್ಲಾ ಕೆಲಸಗಳೂ ಬಹುತೇಕ ಪೂರ್ಣಗೊಂಡಿವೆ. ಅದು ಮುಗಿದ ನಂತರ, ನಾವು 200 ಕ್ಕೂ ಹೆಚ್ಚು ಹಾಸಿಗೆಗಳ ಜೊತೆಗೆ ಆಮ್ಲಜನಕ ಸೌಲಭ್ಯವನ್ನೂ ಒದಗಿಸಬಹುದು ಎಂದು ಹೇಳಿದರು.
Advertisement