ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ಕಾಡುಗಳು ಭದ್ರಾ ಹುಲಿ ಮೀಸಲು ಪ್ರದೇಶವಾಗಿದ್ದು, ಆಗಾಗ್ಗೆ ಹುಲಿ ಮತ್ತಿತರ ವನ್ಯಜೀವಿಗಳ ನಡುವಣ ಘರ್ಷಣೆ ನಡೆಯುತ್ತಲೇ ಇರುತ್ತದೆ.
ಎನ್.ಆರ್.ಪುರ ಕಾಡಿನಲ್ಲಿ ಭಾನುವಾರ ಹುಲಿ ಮರಿಯೊಂದು ಕೊಲಲ್ಪಟ್ಟಿದ್ದು, ಅದರ ದೇಹದ ಭಾಗಗಳನ್ನು ಆರೋಪಿಗಳು ಮಂಡ್ಯದಲ್ಲಿ ಮಾರಾಟ ಮಾಡಲು ಯತ್ನಿಸಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಗಳ ಕೈಗೆ ಸಿಕ್ಕಿ ಬಿದಿದ್ದಾರೆ.
ರವಿಶಂಕರ್ ನೇತೃತ್ವದ ರಾಜ್ಯ ಅರಣ್ಯ ಇಲಾಖೆ ತಂಡ ಮಂಡ್ಯ ನಗರದಲ್ಲಿ ನಾಲ್ವರು ವನ್ಯಜೀವಿ ಮಾರಾಟಗಾರರನ್ನು ಬಂಧಿಸಿದೆ. ಆರೋಪಿಗಳಲ್ಲಿ ಒಬ್ಬನಾದ ಎನ್ ಆರ್ ಪುರ ತಾಲೂಕ್ ವಾರ್ಕಟ್ಟೆ ಗ್ರಾಮದ ಅಶ್ವಥ್ ಕುಮಾರ್, ಹುಲಿಯನ್ನು ಭೇಟಿಯಾಡಿದ್ದು, ಅದರ ಚರ್ಮ ಹಾಗೂ 10 ಉಗುರುಗಳನ್ನು ತೆಗೆದಿದ್ದಾನೆ.ಇತರ ಮೂವರು ಆರೋಪಿಗಳಾದ ಉದಯ್ ಕುಮಾರ್, ರಾಜನ್ ಮತ್ತು ಸಚಿನ್ ಮಂಡ್ಯದವರಾಗಿದ್ದಾರೆ.
ಬಂಧಿತರಿಂದ ಹುಲಿ ಚರ್ಮ,10 ಉಗುರುಗಳು ಮತ್ತು ಎರಡು ಬೈಕ್ ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ, ಈ ಹುಲಿಯ ಕೊಲೆ ಮತ್ತು ದೇಹದ ಭಾಗಗಳು ಮಂಡ್ಯದಲ್ಲಿ ಮಾರಾಟದ ಬಗ್ಗೆ ಕೊಪ್ಪ ಪ್ರಾದೇಶಿಕ ವಿಭಾಗದಿಂದ ವಿಸ್ತೃತವಾದ ವಿಚಾರಣೆ ನಡೆಸಲು ಮುಖ್ಯ ವನ್ಯಜೀವಿ ಮೇಲ್ವಿಚಾರಕರು ಕೋರಿದ್ದಾರೆ.
ಎನ್ ಆರ್ ಪುರ ಕಾಡಿನಲ್ಲಿ ಹುಲಿಯನ್ನು ಭೇಟಿಯಾಡಿರುವ ಕಳ್ಳರು, ಕಳ್ಳ ಸಾಗಣೆ ಮೂಲಕ ಮಂಡ್ಯಕ್ಕೆ ತಂದು ಸ್ನೇಹಿತರ ಸಹಾಯದಿಂದ ಅದರ ಚರ್ಮ ಮತ್ತು ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಮುಂದಿನ ವಿಚಾರಣೆಗಾಗಿ ಈ ಪ್ರಕರಣವನ್ನು ಮಂಡ್ಯ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
Advertisement