ಮಂಡ್ಯ: ಬಡ್ಡಿ ಆಸೆಗೆ 20 ಕೋಟಿ ರೂ. ಮೊತ್ತದ ಚಿನ್ನ ಕಳೆದುಕೊಂಡ ಸ್ತ್ರೀಯರು!

ವಂಚಕ ಬ್ಯಾಂಕ್ ಉದ್ಯೋಗಿಯೊಬ್ಬನ ಕುತಂತ್ರಕ್ಕೆ ಬಲಿಯಾಗಿ ನಾರೀಮಣಿಯರು 20 ಕೋಟಿ ರೂ. ಗೂ ಅಧಿಕ ಮೊತ್ತದ ಚಿನ್ನವನ್ನು ಕಳೆದುಕೊಂಡಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ವಂಚಕ ಬ್ಯಾಂಕ್ ಉದ್ಯೋಗಿಯೊಬ್ಬನ ಕುತಂತ್ರಕ್ಕೆ ಬಲಿಯಾಗಿ ನಾರೀಮಣಿಯರು 20 ಕೋಟಿ ರೂ. ಗೂ ಅಧಿಕ ಮೊತ್ತದ ಚಿನ್ನವನ್ನು ಕಳೆದುಕೊಂಡಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು- ಮೈಸೂರು  ಹೆದ್ದಾರಿಯಲ್ಲಿರೋ ಈ ಫೆಡ್ ಬ್ಯಾಂಕ್‌ನಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಎಂಬಾತನೇ ಮಹಿಳೆಯರನ್ನು ವಂಚಿಸಿದ್ದು ಈತ ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಎಂದು ತಿಳಿದು ಬಂದಿದೆ.

ಈ ಪಡ್ ಬ್ಯಾಂಕ್‌ನಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್, ನಯ ನಾಜೂಕಿನ ಮಾತುಗಳಿಂದ ತಮ್ಮ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟರೆ ಅಧಿಕ ಬಡ್ಡಿ ಕೊಡ್ತಾರೆಂದು ಮಹಿಳೆಯರನ್ನು ನಂಬಿಸಿದ್ದ. ನಮ್ಮಲ್ಲಿ ವಾರಕ್ಕೆ ಶೇ ೧೦ರಷ್ಟು ಹಾಗೂ ತಿಂಗಳಿಗೆ ಶೇ ೪೦% ಬಡ್ಡಿ ಕೊಡಿಸುವುದಾಗಿ ನಂಬಿಸಿದ್ದ. ಮಹಿಳೆಯರಿಂದ ಪಡೆದ ಚಿನ್ನವನ್ನು ಈತ ಬ್ಯಾಂಕ್‌ನಲ್ಲಿ ಇಟ್ಟಿರುವುದಾಗಿ ಹೇಳಿ, ಕೆಲ ತಿಂಗಳ ಕಾಲ ಬಡ್ಡಿಯನ್ನೂ ಕೊಡುತ್ತಾ ಬಂದಿದ್ದ. ಇದನ್ನು ನಂಬಿದ್ದ ಹಲವು ಮಹಿಳೆಯರು ಈತನಿಗೆ ತಮ್ಮಲ್ಲಿದ್ದ ಚಿನ್ನವೆನ್ನಲ್ಲವನ್ನೂ ನೀಡಿದ್ದರು.

ಮಹಿಳೆಯರಿಯಿಂದ ಬರೋಬ್ಬರಿ ೨೦ ಕೋಟಿ ಮೌಲ್ಯದ ಕೆಜಿ ಗಟ್ಟಲೆ ಚಿನ್ನ ಸಂಗ್ರಹಣೆ ಮಾಡಲಾಗಿದೆ, ಅವ್ರಿಗೆಲ್ಲ ಕೆಲವು ತಿಂಗಳು ಬಡ್ಡಿ ನೀಡಿದ್ದು ಈತ ಕೆಲ ತಿಂಗಳ ಬಳಿಕ ನಾಪತ್ತೆಯಾಗಿದ್ದ. ಇದರಿಂದ ವಿಚಲಿತರಾದ ಈತನಿಗೆ ಚಿನ್ನ ಕೊಟ್ಟವರು ಅವನ ಮನೆಗೆ ಹೋಗಿ ವಿಚಾರಿಸಿದ್ದರು. ಆದರೆ ಅತನ ಮನೆಯವರು ಆತನನ್ನು ಕೇಳಿಕೊಂಡು ಬಂದವರಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಕಡೆಗೆ ಮಂಗಳಮುಖಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ, ಆಗ ವಂಚಕನ ಪ್ರಕರಣ ಬಯಲಿಗೆ ಬಂದಿದೆ. ಯುವಕನ ವಂಚನೆ ವಿಷಯ ತಿಳಿಯುತ್ತಿದ್ದಂತೆ ಇದೀಗ ಚಿನ್ನ ಕಳೆದುಕೊಂಡ ಇತರೆ ಮಹಿಳೆಯರು ಸಹ ಪೂರ್ವ ಪೊಲೀಸ್ ಠಾಣೆ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದು, ತಮ್ಮ ಚಿನ್ನ ಕೊಡಿಸಿಕೊಡಿ ಎಂದು ಕಣ್ಣೀರು ಹಾಕ್ತಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೂರ್ವ ಠಾಣಾ ಪೊಲೀಸರು ದೂರುದಾರರಿಂದ ಮಾಹಿತಿ ಪಡೆದು ತಲೆ ಮರೆಸಿಕೊಂಡಿದ್ದ ಆರೋಪಿ ಸೋಮಶೇಖರ್‌ನನ್ನು ಬಂಧಿಸಿದ್ದು, ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಬ್ಯಾಂಕ್ ನೌಕರನೆಂದು ವಂಚಿಸಿದ್ದು, ಈತನ ವಂಚನೆಗೆ ಮಂಡ್ಯ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಜಿಲ್ಲಾಧ್ಯಕ್ಷೆ ರಶ್ಮಿ ಕೂಡ ಸಿಲುಕಿ ತಮ್ಮ ಚಿನ್ನವನ್ನು ಕಳೆದುಕೊಂಡಿದ್ದಾರೆ. ಈತನ ಮಾತು ನಂಬಿ  ಯಾವುದೇ ದಾಖಲೆ ಇಲ್ಲದೆ ಈತನಿಗೆ  ತಮ್ಮ ಚಿನ್ನವನ್ನು ನೀಡಿದ್ದಾರೆ. ಅಧಿಕ ಬಡ್ಡಿ ಆಸೆಗೆ ಇವರೆಲ್ಲರೂ ಇದೀಗ ಚಿನ್ನ ಕಳೆದುಕೊಂಡಿದ್ದು, ಈ ಪ್ರಕರಣದ ಹಿಂದೆ ಮಂಡ್ಯ ನಗರದ ಶ್ರೀಮಂತ ವರ್ತಕನ ಸೊಸೆ ಭಾಗಿಯಾಗಿರೋ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈತನ ವಂಚನೆಯ ಕೃತ್ಯ ತಿಳಿಯುತ್ತಿದ್ದಂತೆಯೇ ಬ್ಯಾಂಕ್‌ನವರು ಈತನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈತ ಷೋಕಿಗಾಗಿ ತಾನು ಈ ಕೃತ್ಯ ಎಸಗಿರೋದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದು, ತಾನು ಮಹಿಳೆಯರಿಂದ ಪಡೆದ ಚಿನ್ನವನ್ನು ಬೇರೆಬೇರೆ ಫೈನಾನ್ಸ್ನಲ್ಲಿ ಅಡವಿಟ್ಟಿರೋದಾಗಿ ತಿಳಿಸಿದ್ದಾನೆ. ಇದೀಗ ಪೊಲೀಸರು ಚಿನ್ನವನ್ನು ವಶಕ್ಕೆ ವಪಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿ ಆರೋಪಿಯಿಂದ ಮೋಸಕೊಳ್ಳದಾವರ ಚಿನ್ನ ಕೊಡಿಸುವ ಪ್ರಯತ್ನಿಸುವುದಾಗಿ ಎಸ್‌ಪಿ ಪರಶುರಾಮ್ ಮಾಧ್ಯಮದವರಿಗೆ ತಿಳಿಸಿದ್ದಾರೆ. ಒಟ್ಟಾರೆ ಅಧಿಕ ಬಡ್ಡಿಯ ಆಸೆಗೆ ಬಿದ್ದ ಮಹಿಳೆಯರು ತಮ್ಮ ಮನೆಯಲ್ಲಿದ್ದ ಚಿನ್ನವನ್ನೆಲ್ಲಾ ವಂಚಕನ ಮಾತು ನಂಬಿ ಆತನಿಗೆ  ಕೊಟ್ಟು ಇದೀಗ ಕಣ್ಣೀರು ಹಾಕ್ತಿದ್ದಾರೆ. ಇನ್ನಾದ್ರು ಮಹಿಳೆಯರು ಎಚ್ಚೆತ್ತು ಇಂತಹ ವಂಚಕರ ಆಸೆ ಆಮಿಷಗಳಿಗೆ ಒಳಗಾಗುವುದನ್ನು ಬಿಡಬೇಕಿದೆ ಅಲ್ವಾ.!

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com