ಬೆಂಗಳೂರು: ವಿಧಾನಸಭೆ ಉಪ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ನೇಮಕಾತಿ ಆದೇಶ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಭರವಸೆ ನೀಡಿದ್ದಾರೆ.
ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಿಯು ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು 1 ವಾರದಿಂದ ನ ಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ವಾಪಸ್ ಪಡೆದಿದ್ದಾರೆ.
ನೇಮಕಾತಿ ಆದೇಶ ಕೊಡಿಸುವ ಕುರಿತು ತಮ್ಮ ಫೇಸ್'ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿವರು, ಪ್ರತಿಭಟನಾನಿರತ ಉಪನ್ಯಾಸಕ ಅಭ್ಯರ್ಥಿಗಳ ಪರವಾಗಿದ್ದೇನೆ. ಕೌನ್ಸೆಲಿಂಗ್ ಮುಗಿದ ಬಳಿಕ ನೇಮಕಾತಿ ಆದೇಶ ನೀಡಲಾಗುತ್ತದೆ ಎಂಬ ಮಾತಿಗೆ ನಾನು ಈಗಲೂ ಬದ್ಧವಾಗಿದ್ದೇನೆ. ಆದೇಶ ಕೊಡಿಸುವುದು ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ನೀತಿ ಸಂಹಿತೆ ಜಾರಿ ಕಾರಣ ಸಚಿವನಾಗಿ ಇದಕ್ಕಿಂತ ಹೆಚ್ಚೇನೂ ಹೇಳಲಾರೆ, ಹೇಳಬಾರದು. ಆದರೆ, ಕಳೆದ ಒಂದು ವರ್ಷದಿಂದ ನನ್ನ ಕ್ರಮಗಳನ್ನು ನೋಡುತ್ತಿರುವ ಉಪನ್ಯಾಸಕ ಅಭ್ಯರ್ಥಿಗಳಿಗೆ ನನ್ನ ಮಾತಿನ ಮೇಲೆ ವಿಶ್ವಾಸ ಇರಿಸುವಂತೆ ಅಪೇಕ್ಷಿಸುತ್ತೇನೆ. ಕೊರೋನಾ ಪಿಡುಗಿನ ಸಮಯದಲ್ಲಿ ಹೋರಾಟ ಮುಂದುವರೆಸದೆ ಇಲ್ಲಿಗೇ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಇದರ ಜೊತೆಗೆ ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಪಿಯು ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಪಿಯು ಪ್ರಾಂಶುಪಾಲರ ಸಂಘದ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಭೇಟಿ ನೀಡಿ ನವೆಂಬರ್ ಎರಡನೇ ವಾರದಲ್ಲಿ ನೇಮಕಾತಿ ಆದೇಶ ಕೊಡಿಸುವ ಜವಾಬ್ದಾರಿ ತಮ್ಮದು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಹಾಗೂ ಗ್ರಾಮ ಪಂಚಾಯಿತಿ ನೀತಿ ಸಂಹಿತೆ ಜಾರಿಗೂ ಮುನ್ನ ನೇಮಕಾತಿ ಆದೇಶ ಪ್ರತಿ ಕೊಡಿಸುವುದಾಗಿ ಪ್ರತಿಭಟನಾಕಾರರನ್ನು ಮನವೊಲಿಸಿದರು.
Advertisement