ಬೆಂಗಳೂರು: ಡ್ರಗ್ ಕೇಸಿನಲ್ಲಿ ಜೈಲಿನಲ್ಲಿರುವ ಇಬ್ಬರು ಸ್ಯಾಂಡಲ್ ವುಡ್ ನಟಿಯರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರಿನ ರಾಜಶೇಖರ್ ಹಾಗೂ ಗುಬ್ಬಿ ತಾಲೂಕಿನ ಹಾಗಲವಾಡಿಯ ವೇದಾಂತ್ ರಮೇಶ್ ಬಂಧಿತ ಆರೋಪಿಗಳು.
ಇಬ್ಬರನ್ನೂ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.
ಆರೋಪಿಗಳು ನಿನ್ನೆ ಡಿಟೊನೇಟರ್ ಮಾದರಿಯ ವಸ್ತುವನ್ನು ಪತ್ರದೊಳಗಿಟ್ಟು ಡ್ರಗ್ ಮತ್ತು ನಾರ್ಕೊಟಿಕ್ ಕೇಸುಗಳಿಗೆ ಸಂಬಂಧಪಟ್ಟ ವಿಶೇಷ ಕೋರ್ಟ್ ನ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದರು. ನ್ಯಾಯಾಧೀಶ ಜಿ ಎಂ ಶೀನಪ್ಪ ಅವರ ವಿಳಾಸಕ್ಕೆ ಅಂಚೆ ಮೂಲಕ ಪತ್ರ ಬಂದಿದ್ದು, ಅದನ್ನು ಅವರು ತೆರೆದು ನೋಡಿದಾಗ, ಸಣ್ಣ ಡಿಟೊನೇಟರ್ ರೀತಿಯ ವಸ್ತುವಿನೊಂದಿಗೆ ಬೆದರಿಕೆ ಪತ್ರವನ್ನು ಕೂಡ ಬರೆಯಲಾಗಿತ್ತು. ಸ್ಫೋಟಕಗಳನ್ನು ಬಳಸಿ ನ್ಯಾಯಾಧೀಶರ ಕಾರನ್ನು ಸ್ಫೋಟಿಸಿ ಬೇಡಿಕೆ ಈಡೇರಿಸದಿದ್ದರೆ ಕೊಲ್ಲುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು.
ಪೋಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ಹಿಡಿಯಲು ಶೇಷ ತಂಡಗಳನ್ನು ರಚಿಸಿದ್ದರು.
Advertisement