ಬಿಜೆಪಿ ಸಂಘರ್ಷದಿಂದಲೇ ಗೆದ್ದಿದೆ ಶಿರಾದಲ್ಲಿ ಚುನಾವಣೆಯ ಇತಿಹಾಸ ಬದಲಿಸಲಿದ್ದೇವೆ: ತೇಜಸ್ವಿ ಸೂರ್ಯ 

ಬಿಜೆಪಿಯ ಇತಿಹಾಸದಲ್ಲಿ ಗೆಲುವು ಸುಲಭವಾಗಿ ಸಿಕ್ಕಿಲ್ಲ,  ದೇಶಾದ್ಯಂತ ಈಗ 303 ಬಿಜೆಪಿಯ ಸಂಸದರಿದ್ದಾರೆ, ಪ್ರತಿಯೊಂದನ್ನೂ ಸಂಘರ್ಷದಿಂದ ಗೆದ್ದಿದ್ದೇವೆ ಶಿರಾದಲ್ಲೂ ಸಂಘರ್ಷದಿಂದಲೇ ಗೆಲ್ಲಲಿದ್ದೇವೆ ಎಂದು ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ. 
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಶಿರಾ: ಬಿಜೆಪಿಯ ಇತಿಹಾಸದಲ್ಲಿ ಗೆಲುವು ಸುಲಭವಾಗಿ ಸಿಕ್ಕಿಲ್ಲ,  ದೇಶಾದ್ಯಂತ ಈಗ 303 ಬಿಜೆಪಿಯ ಸಂಸದರಿದ್ದಾರೆ, ಪ್ರತಿಯೊಂದನ್ನೂ ಸಂಘರ್ಷದಿಂದ ಗೆದ್ದಿದ್ದೇವೆ ಶಿರಾದಲ್ಲೂ ಸಂಘರ್ಷದಿಂದಲೇ ಗೆಲ್ಲಲಿದ್ದೇವೆ ಎಂದು ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ. 

ಶಿರಾ ಉಪಚುನಾವಣೆಯ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿರುವ ಸಂಸದ ತೇಜಸ್ವಿ, ಈ ಚುನಾವಣೆ ಶಿರಾದ ಇತಿಹಾಸದಲ್ಲಿ ಬದಲಾವಣೆ ತರುವ ಚುನಾವಣೆಯಾಗಲಿದೆ ಎಂದು ಹೇಳಿದ್ದಾರೆ. "ಹೇಮಾವತಿ ನೀರಿನ ಬಗ್ಗೆ ಮಾತನಾಡಿದರೆ ಇಲ್ಲಿನ ಜನ ನಂಬದೇ ಇರುವ ಮಟ್ಟಿಗೆ ಇಲ್ಲಿನ ಅಧಿಕಾರದಲ್ಲಿದ್ದ ನಾಯಕರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. 

ಇಂದಿಗೂ ಸರಿಯಾದ ನೀರಿನ ಸೌಲಭ್ಯ ಇಲ್ಲ ಅಂತಾದರೆ ನಾವು ಯಾರನ್ನ ಪ್ರಶ್ನಿಸಬೇಕು? 60 ವರ್ಷ ಆಳಿದವರನ್ನೋ ಅಥವಾ ಈವರೆಗೂ ಅವಕಾಶವೇ ಸಿಕ್ಕಿಲ್ಲ ಅವರನ್ನು ಕೇಳಬೇಕೋ? ಎಂದು ಪ್ರಶ್ನಿಸಿರುವ ಅವರು, 60 ವರ್ಷಗಳ ಕಾಲ ಜನ ಸತತವಾಗಿ ಆಯ್ಕೆ ಮಾಡಿದರೂ ಸಹ ಈ ಭಾಗದಲ್ಲಿ ಅಭಿವೃದ್ಧಿಯಾಗಿಲ್ಲ. ಆದರೆ ಈ ಬಾರಿ ಶಿರಾದ ಯುವ ಜನತೆ, ಬಿಜೆಪಿ ಕಾರ್ಯಕರ್ತರು ಬದಲಾವಣೆ ತರಲು ಸಂಕಲ್ಪಿಸಿದ್ದಾರೆ" ಎಂದು ತೇಜಸ್ವಿ ಶಿರಾದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ ಕ್ಷೇತ್ರದಲ್ಲಿ ಮತಬ್ಯಾಂಕ್ ನ್ನು ಭದ್ರಪಡಿಸಿಕೊಳ್ಳುವುದರತ್ತ ಗಮನ ಹರಿಸಿ ಅಭಿವೃದ್ಧಿ ಕುಗ್ಗಿದೆ ಎಂದು ಆರೋಪಿಸಿರುವ ಅವರು, "ನೀರಿನ ವ್ಯವಸ್ಥೆ ಮಾಡಿಲ್ಲ, ಹೊಸ ಅಣೆಕಟ್ಟೆಗಳನ್ನು ಕಟ್ಟಿಸಲಿಲ್ಲ, ಕೆರೆಗಳ ಅಭಿವೃದ್ಧಿ ಮಾಡಲಿಲ್ಲ ವೋಟ್ ಬ್ಯಾಂಕ್ ಭದ್ರಪಡಿಸಿಕೊಂಡಿದ್ದಷ್ಟೇ 60 ವರ್ಷಗಳಲ್ಲಿ ಕಾಲ ಅಧಿಕಾರದಲ್ಲಿದ್ದವರು ಮಾಡಿರುವುದು" ಎಂದು ತೇಜಸ್ವಿ ಸೂರ್ಯ ವಿಪಕ್ಷಗಳಿಗೆ ಗೆ ಟಾಂಗ್ ಕೊಟ್ಟಿದ್ದಾರೆ. 

"ಈ ಚುನಾವಣೆಯಲ್ಲಿ ಯುವಕರು ಪಕ್ಷಾತೀತವಾಗಿ ಬಿಜೆಪಿ ಜೊತೆ ನಿಂತಿದ್ದಾರೆ. ತಮ್ಮ ಮತ ವ್ಯರ್ಥವಾಗಲು ಬಿಡದೇ ಕ್ಷೇತ್ರದ ಅಭಿವೃದ್ಧಿ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆವು ಎಂದು ಹೆಮ್ಮೆಯಿಂದ ಹೇಳಲು ಯುವಕರು ಬಯಸುತ್ತಿದ್ದಾರೆ. ಯುವಜನತೆ ಈ ವರೆಗೂ ಕಾಣದ ಅಭಿವೃದ್ಧಿಯನ್ನು ರಾಜೇಶ್ ಗೌಡ ನೇತೃತ್ವದಲ್ಲಿ ಕಾಣಲಿದ್ದಾರೆ" ಎಂದೂ ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ. 

ಪ್ರಚಾರ ಕಾರ್ಯಕ್ರಮದಲ್ಲಿ ಮುಖಂಡರಾದ ಶ್ರೀ ಅನಿಲ್ ಚಲಗೇರಿ, ಮೈಸೂರು-ಕೊಡಗು ಸಂಸದರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಪ್ರತಾಪ್ ಸಿಂಹ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಅಜಿತ್ ಹೆಗಡೆ ಹಾಗೂ ಇತರ ಹಿರಿಯ ಮುಖಂಡರು ಉಪಸ್ಥಿತರಿದ್ದರು.
 
ಶಿರಾ ಕ್ಷೇತ್ರದ ಪ್ರಚಾರಕ್ಕೆ ತೆರಳುವುದಕ್ಕೂ ಮುನ್ನ ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀಗಳ ಗದ್ದುಗೆ ದರ್ಶನ ಹಾಗೂ ಪೀಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com