ಮಂಗಳೂರು: ಕೊಲೆ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು; ಇನ್ನಿಬ್ಬರು ಪರಾರಿ

ನಿನ್ನೆ ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆಯೇ ತಲವಾರು ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ರೌಡಿಯ ಕಾಲಿಗೆ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ನಿನ್ನೆ ಬಂಟ್ವಾಳದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆಯೇ ತಲವಾರು ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ರೌಡಿಯ ಕಾಲಿಗೆ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.

ದಾಳಿಯಲ್ಲಿ ಗಾಯಗೊಂಡ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗುಂಡಿನ ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ಅವರಿಗೆ ಹಾಗೂ ಕೊಲೆ ಆರೋಪಿ ಖಲೀಲ್ಗೆ ಗಾಯವಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಲ್ಕಾರ್ ನಲ್ಲಿ ನಿನ್ನೆ ರೌಡಿ ಶೀಟರ್ ಫಾರೂಕ್ ಎಂಬಾತನ ಕೊಲೆ ನಡೆದಿತ್ತು. ಕೊಲೆ ಆರೋಪಿ ಖಲೀಲ್ ಮತ್ತು ಆತನ ಜೊತೆ ಇಬ್ಬರು ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾಹಿತಿ ಆಧರಿಸಿ ಅವರನ್ನು ಬೆನ್ನಟ್ಟಿ ಬಂಧಿಸಲು ಹೋದಾಗ ಖಲೀಲ್, ಪೊಲೀಸರ  ಮೇಲೆ ತಲವಾರು ದಾಳಿ ನಡೆಸಿದ್ದಾನೆ. ಆ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದಾರೆ.

ಕೊಲೆ ಆರೋಪಿಗಳ ಪತ್ತೆಗೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ಅವರು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು. 

ಗುಂಡ್ಯ ಬಳಿ ಎಸ್.ಐ.ಗಳಾದ ಅವಿನಾಶ್ ಹಾಗೂ ಪ್ರಸನ್ನ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.  ಆದರೆ ಪೊಲೀಸರ ಮೇಲೆ ತಲವಾರು ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಓರ್ವ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ ಖಲೀಲ್ ಕುಸಿದು ಬಿದ್ದಿದ್ದು, ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಸಮೀಪದ ಬೆಟ್ಟಕ್ಕೆ ಓಡಿ ಹೋಗಿ ತಪ್ಪಿಸಿ ಕೊಂಡಿದ್ದಾರೆ. ಉಪ್ಪಿನಂಗಡಿ ಎಸ್.ಐ.ಈರಯ್ಯ ಅವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಖಲೀಲ್ ಕುಖ್ಯಾತ ಅಪರಾಧಿಯಾಗಿದ್ದು, ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು, ಕಲ್ಲಡ್ಕದಲ್ಲಿ ಉಂಟಾಗುತ್ತಿದ್ದ ಗಲಾಟೆಗೆ ಈತ ಪ್ರಮುಖನಾಗಿದ್ದ. ಈತ ಬಂಟ್ವಾಳ ನಗರ ಠಾಣೆಯ ರೌಡಿಶೀಟರ್ ಆಗಿದ್ದು, ಇತ್ತೀಚಿಗೆ ಈತನ ಗಡಿಪಾರು ಕೂಡ ಆಗಿತ್ತು. ಕಲ್ಲಡ್ಕ ಇತ್ತೀಚಿಗೆ ನಡೆದ ರತ್ನಾಕರ ಶೆಟ್ಟಿಯವರ ಮೇಲೆ ನಡೆದ  ಹಲ್ಲೆ ಪ್ರಕರಣದಲ್ಲಿ ಈತನ ಗಡಿಪಾರು ನಡೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com