ಬೆಂಗಳೂರು: ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪಾಲ್ಗೊಂಡಿದ್ದರು. ಬಿಜೆಪಿ ಸೇರಿದ ನಂತರ ಇದೇ ಮೊದಲ ಬಾರಿಗೆ ಎಸ್.ಎಂ. ಕೃಷ್ಣ, ಆರ್ ಎಸ್ ಎಸ್ ಟೋಪಿ ಧರಿಸಿ, ಹಿಂದುತ್ವ ಮತ್ತು ದೇಶಭಕ್ತಿ ಕುರಿತು ಉಪನ್ಯಾಸ ನೀಡಿದರು.
ನಮ್ಮ ದೇಶದ ಚರಿತ್ರೆ, ಸಂಸ್ಕೃತಿಗೆ ಅಡಿಪಾಯ ಹಾಕಿ ಸಹಸ್ರಾರು ವರ್ಷಗಳಿಂದ ಬಂದಿರುವ ಹಿಂದೂಧರ್ಮದ ಸಿದ್ಧಾಂತವನ್ನು ದೇಶದ ಮುಂದೆ ಪ್ರಸ್ತುತಪಡಿಸುವಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದ್ದು, ಅವರಿಗೆ ಪ್ರಣಾಮ ಸಲ್ಲಿಸುವುದಾಗಿ ತಿಳಿಸಿದರು.
ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರ ವಿಚಾರ ಪ್ರಸ್ತಾಪಿಸಿದ ಎಸ್.ಎಂ.ಕೃಷ್ಣ, ನಮ್ಮ ಶಿಕ್ಷಣ ಪದ್ಧತಿ ಬದಲಾಗಬೇಕು ಎಂಬುದು ವಿವೇಕಾನಂದರ ಉಪದೇಶಗಳಲ್ಲಿ ಒಂದಾಗಿದೆ. ಏಕೆಂದರೆ ನಮ್ಮ ವಿದ್ಯಾಭ್ಯಾಸದ ಪದ್ಧತಿ ಆಂಗ್ಲ ಶಿಕ್ಷಣ ಪದ್ಧತಿ ಅಡಿಪಾಯದ ಮೇಲೆ ನಡೆಯುತ್ತಿದೆ. ಸಮಗ್ರ ಸುಧಾರಣೆ ಇನ್ನೂ ಆಗಿಲ್ಲ, ಭಾರತ ಸರ್ಕಾರ ಉತ್ತಮ ಶಿಕ್ಷಣ ಪದ್ಧತಿ ದೇಶಕ್ಕೆ ಕೊಡಬೇಕಾದ ಅಗತ್ಯವಿದೆ. ಈ ದೆಸೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಕೂಡುಗೆ ಬಹಳಷ್ಟಿದೆ ಎಂದರು.
ಅಮೆರಿಕ, ಜರ್ಮನಿಯಂತಹ ಮುಂದುವರೆದ ರಾಷ್ಟ್ರಗಳಲ್ಲಿ ಪ್ರಾಪ್ತ ವಯಸ್ಕರು ಎರಡು ವರ್ಷಗಳ ಕಾಲ ದೇಶ ಸೇವೆ ಮಾಡಬೇಕೆಂಬ ಕಾನೂನು ಇದೆ. ನಮ್ಮ ದೇಶ ಸ್ವಾತಂತ್ರ್ಯಗೊಂಡ ನಂತರ ಕೆಲವರು ಈ ಸಿದ್ಧಾಂತಕ್ಕೆ ಕಟುಬಿದ್ದು ತಮ್ಮ ಪ್ರಾಣವನ್ನೇ ಆರ್ಪಿಸಿಕೊಂಡಿದ್ದಾರೆ. ದೇಶ ಅಭಿವೃದ್ಧಿ ಪಥದಲ್ಲಿ ಇಂತಹ ಸಿದ್ದಾಂತ ಪ್ರಮುಖವಾಗಿದೆ ಎಂದರು.
Advertisement