ಮಂಗಳೂರು: ಕೊರೋನಾ ಕಾರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ತಿಂಗಳಿನ ಸ್ಟೈಫಂಡ್ ತಲುಪಲು ವಿಳಂಬವಾಗುತ್ತಿದೆ.
ಶೆ. 60 ಮತ್ತು ಅದಕ್ಕಿಂತ ಹೆಚ್ಚಿನ ಸಮಸ್ಯೆ ಹೊಂದಿರುವ ಸಂತ್ರಸ್ತರಿಗೆ ಮಾಸಿಕ 3,000 ರೂ., ಶೇ. 25 ಮತ್ತು ಅದಕ್ಕಿಂತ ಹೆಚ್ಚಿನ ಸಮಸ್ಯೆ ಹೊಂದಿರುವವರಿಗೆ 1,500 ರೂಪಾಯಿಗಳನ್ನು ಪ್ರತಿ ತಿಂಗಳು ಸ್ಟೈಪಂಡ್ ರೂಪದಲ್ಲಿ ನೀಡಲಾಗುತ್ತಿದೆ.
ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಇತರ ಸ್ಥಳಗಳಲ್ಲಿ ಸುಮಾರು 3,600 ಕ್ಕೂ ಹೆಚ್ಚು ಸಂತ್ರಸ್ತರಿದ್ದಾರೆ. ಇವರಿಗೆಲ್ಲಾ ಸರ್ಕಾರದ ವಿವಿಧ ಯೋಜನೆಗಳಿಂದ ಸೌಲಭ್ಯ ದೊರಕುತ್ತಿವೆ.
ಹಲವು ಸಂತ್ರಸ್ತರು ಸರ್ಕಾರ ನೀಡುವ ಈ ಹಣವನ್ನೇ ನಂಬಿಕೊಂಡು ಬದುಕುತ್ತಿದ್ದಾರೆ, ಆದರೆ ಕೆಲವು ಕಳೆದ ತಿಂಗಳುಗಳಿಂದ ಸರಿಯಾಗಿ ಹಣ ತಲುಪದ ಕಾರಣ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ್ ಗೌಡ ಹೇಳಿದ್ದಾರೆ.
ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಹಣ ಸಿಗುತ್ತಿಲ್ಲ, ಸುಮಾರು ಒಂದು ವರ್ಷವಾದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲವೇ? ಯಾವುದೇ ಸೌಲಭ್ಯವಿಲ್ಲದೇ ಸರ್ಕಾರದ ಸ್ಟೈಪಂಡ್ ಇಲ್ಲದೇ ಕೊರೋನಾ ಸಂದರ್ಭದಲ್ಲಿ ಇವರು ಹೇಗೆ ತಮ್ಮ ಜೀವನ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.,
ಸ್ಟೈಫಂಡ್ ವಿತರಣೆಯಲ್ಲಿ ತಾಂತ್ರಿಕ ಸಮಸ್ಯೆಗಳಿವೆ, ಕೆಲವು ಸಂತ್ರಸ್ತರಿಗೆ ತಪ್ಪು ಮಾಹಿತಿ ನೀಡಿರಬಹುದು ಅಥವಾ ಅವರ ಗುರುತಿನ ಚೀಟಿ ತಪ್ಪಿರಬಹುದು, ಈ ಸಂಬಂಧ ಗಮನ ಹರಿಸಲಾಗುವುದು ಎಂದು ಜಿಲ್ಲಾ ಎಂಡೋ ಸಲ್ಫಾನ್ ನೋಡಲ್ ಅಧಿಕಾರಿ ಡಾ.ನವೀನ್ ಚಂದ್ರ ಹೇಳಿದ್ದಾರೆ. ಹಾಸಿಗೆ ಹಿಡಿದ ಸಂತ್ರಸ್ತರಿಗಾಗಿ ಸರ್ಕಾರ ನಡೆಸುವ ಶಾಶ್ವತ ಆರೈಕೆ ಕೇಂದ್ರವನ್ನು ತೆರೆಯುವುದು ಮತ್ತೊಂದು ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.
ಎಂಡೋ ಸಲ್ಫಾನ್ ಪೀಡಿತರಿಗೆ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು, ಆದರೆ 2011 ರಿಂದಲೂ ಈ ಬೇಡಿಕೆ ಈಡೇರಿಲ್ಲ, ಸದ್ಯ ಕೊಕ್ಕಾಡ, ಕೊಯಿಲಾ ಮತ್ತು ಉಜಿರೆಯಲ್ಲಿ ಡೇ ಕೇರ್ ಸೆಂಟರ್ ಗಳಿವೆ, 8 ಕೇಂದ್ರಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ, ಆದರೆ ಅವುಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ.
ದಿನದ ಆರೈಕೆ ಕೇಂದ್ರಗಳ ಅನುಪಸ್ಥಿತಿಯಲ್ಲಿ, ಮೊಬೈಲ್ ವೈದ್ಯಕೀಯ ಘಟಕಗಳು ಸಂತ್ರಸ್ತರಿಗೆ ಔಷಧಿಗಳನ್ನು ಒದಗಿಸುತ್ತಿವೆ. ಇವುಗಳನ್ನು ಆಸ್ಪತ್ರೆಯಿಂದಲೇ ಒದಗಿಸಲಾಗುತ್ತಿದೆ. ಅಲ್ಲಿ ಸಿಗದ ಔಷಧಿಗಳನ್ನು ಹೊರಗಡೆಯಿಂದ ತಂದು ಪೂರೈಸಲಾಗುತ್ತಿದೆ. ಆದರೆ ಕೊರೋನಾ ಸಂದರ್ಭದಲ್ಲಿ ಡೇ ಕೇರ್ ಸೆಂಟರ್ ಗಳನ್ನು ತೆರೆಯುವುದು ಅತಿ ಹೆಚ್ಚು ಅಪಾಯಕಾರಿ ಎಂದು ಡಾ. ಚಂದ್ರ ತಿಳಿಸಿದ್ದಾರೆ.
Advertisement