ಬೆಂಗಳೂರು: ಐಎಂಎ ಹಗರಣದ ಪ್ರಮುಖಾ ಆರೋಪಿ, ಐಎಂಎ ಜ್ಯುವೆಲ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ಗೆ ಕರ್ನಾಟಕ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.. ಮನ್ಸೂರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ನಂತರ ಅವರು 2019 ರ ಜುಲೈನಿಂದ ಜೈಲಿನಲ್ಲಿದ್ದಾರೆ.
ವರದಿಗಳ ಪ್ರಕಾರ, ಅವರ ಜಾಮೀನು ಷರತ್ತುಗಳಲ್ಲಿ ಅವರ ಪಾಸ್ಪೋರ್ಟ್ ಸಲ್ಲಿಸುವುದು ಮತ್ತು 5 ಲಕ್ಷ ರೂ ಬಂಡ್ ಸಲ್ಲಿಕೆಯು ಸೇರಿದೆ.ಇದಲ್ಲದೆ ಅಧೀನ ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಯಾವುದೇ ಕಾರಣಕ್ಕೂ ಸಾಕ್ಷಿ ನಾಶ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಪ್ರಕರಣದ ವಿಚಾರಣೆ ಮುಗಿಯುವತನಕ ಪ್ರಾಪಾರ್ಟಿಗಳ ವಿಲೇವಾರಿ ಮಾಡುವಂತಿಲ್ಲ. 15 ದಿನಗಳಿಗೊಮ್ಮೆ ಇಡಿ ಕಚೇರಿಗೆ ಭೇಟಿ ನೀಡಿ ಸಹಿ ಹಾಕಬೇಕು. ಟ್ರಾಯಲ್ ಕೋರ್ಟ್ ಅನುಮತಿ ಇಲ್ಲದೇ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎನ್ನುವ ಷರತ್ತುಗಳೂ ಇದೆ.
ವರದಿಗಳ ಅನುಸಾರ ಮನ್ಸೂರ್ 40,000 ಹೂಡಿಕೆದಾರರ ಮೇಲೆ ಪರಿಣಾಮ ಬೀರುವ ಹಗರಣದ ಪ್ರಮುಖ ವ್ಯಕ್ತಿಯಾಗಿದ್ದು ಹಲವಾರು ಮಧ್ಯಮ ಮತ್ತು ಕೆಳ-ಮಧ್ಯಮ ವರ್ಗದ ಮುಸ್ಲಿಮರು ಅವರ “ಹಲಾಲ್” ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳವು ಇತ್ತೀಚೆಗೆ ಕರ್ನಾಟಕದ ಇಬ್ಬರು ಸರ್ಕಾರಿ ಅಧಿಕಾರಿಗಗಳ ವಿರುದ್ಧ ಚಾರ್ಜ್ಶೀಟ್ ನೀಡಿತ್ತು ಬೆಂಗಳೂರು ಉತ್ತರ ತಾಲ್ಲೂಕು ಅಂದಿನ ಸಹಾಯಕ ಆಯುಕ್ತ ಎಲ್.ಸಿ. ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಎನ್. ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು.
ಖಾನ್ ಜೊತೆಗೆ, ಯೋಜನೆಯ ಲಾಭ ಪಡೆದ ನಿರ್ದೇಶಕರು ಮತ್ತು ಇತರರನ್ನು ಸಹ ಬಂಧಿಸಲಾಗಿದೆ. ಒಟ್ಟು ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 25 ಜನರನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ನಲ್ಲಿ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನ್ನ ಚಾರ್ಜ್ಶೀಟ್ನಲ್ಲಿ, ಐಎಂಎ ಚಟುವಟಿಕೆಗಳಿಗೆ ಕ್ಲೀನ್ ಚಿಟ್ ನೀಡಿದ್ದಕ್ಕಾಗಿ ನಾಗರಾಜ್ ಖಾನ್ ಮತ್ತು ಐಎಂಎಯ ಇತರ ನಿರ್ದೇಶಕರಿಂದ 4.5 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ಸಿಬಿಐ ಆರೋಪಿಸಿದರೆ, ಮಧ್ಯವರ್ತಿಯಾಗಿ ಮಂಜುನಾಥ್ ಸಹ 10 ಲಕ್ಷ ರೂ. .ಪಡೆದಿದ್ದಾರೆ ಎಂದು ಹೇಳಲಾಗಿದೆ.
ಇದೇ ಪ್ರಕರಣದಲ್ಲಿ ಪೂರಕ ಚಾರ್ಜ್ಶೀಟ್ನಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿದಂತೆ 28 ಆರೋಪಿಗಳನ್ನು ಹೆಸರಿಸಲಾಗಿದೆ. ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಹೊರತುಪಡಿಸಿ, ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಸಿಐಡಿ) ಇಬಿ ಶ್ರೀಧರ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಸ್ಟೇಷನ್ ಹೌಸ್ ಅಧಿಕಾರಿ ಎಂ ರಮೇಶ್ ಮತ್ತು ಸ್ಟೇಷನ್ ನನ್ಸಬ್ ಇನ್ಸ್ಪೆಕ್ಟರ್ ಪಿ ಗೌರಿಶಂಕರ್ ಅವರನ್ನು ಆರೋಪಿಗಳೆಂದು ಪಟ್ಟಿ ಮಾಡಲಾಗಿದೆ. ರಮೇಶ್ ಮತ್ತು ಗೌರಿಶಂಕರ್ ಅವರ ಕೆಲಸವನ್ನು ನೇರವಾಗಿ ಮೇಲ್ವಿಚಾರಣೆ ಮಾಡುವ ಹಿಲೋರಿ ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರಿಂದ ಲಿಖಿತ ದೂರುಗಳನ್ನು ಸ್ವೀಕರಿಸಿದರೂ ಪ್ರಕರಣಗಳನ್ನು ದಾಖಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಬಿಐ ತನಿಖೆ ತೋರಿಸಿದೆ ಎಂದು ಐಎಎನ್ಎಸ್ ಈ ಹಿಂದೆ ವರದಿ ಮಾಡಿದೆ.
Advertisement