ಇಳಕಲ್ ಸೀರೆ
ಇಳಕಲ್ ಸೀರೆ

ಸ್ವಾವಲಂಬಿ ಭಾರತ ನಿರ್ಮಾಣ; ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡ ಖಣ, ಇಳಕಲ್ ಸೀರೆಗೂ ಬೇಕಿದೆ ರಾಷ್ಟ್ರೀಯ ಮಾರುಕಟ್ಟೆ!

ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿ ಪ್ರಾಂತಗಳಲ್ಲಿರುವ ಅಲ್ಲಿನ ದೇಶಿಯ ವೈಶಿಷ್ಟ್ಯಗಳನ್ನು ರಾಷ್ಟ್ರದ ಜತೆಗೆ ಪರಿಚಯಿಸುವ ಕೈಂಕರ್ಯ ನಡೆಸಿದ್ದಾರೆ. 

ಬಾಗಲಕೋಟೆ: ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿ ಪ್ರಾಂತಗಳಲ್ಲಿರುವ ಅಲ್ಲಿನ ದೇಶಿಯ ವೈಶಿಷ್ಟ್ಯಗಳನ್ನು ರಾಷ್ಟ್ರದ ಜತೆಗೆ ಪರಿಚಯಿಸುವ ಕೈಂಕರ್ಯ ನಡೆಸಿದ್ದಾರೆ. 

ಜತೆಗೆ ತಮ್ಮ ಪ್ರತಿ ಹೆಜ್ಜೆ ಹಾಗೂ ಉಸಿರಲ್ಲೂ ಸ್ವಾವಲಂಬನೆ ಮಂತ್ರ ಜಪಿಸುತ್ತಿದ್ದಾರೆ. ಅವರ ಪ್ರತಿ ಮಾತಿನಲ್ಲೂ ಸ್ವಾವಲಂಬನೆ ಜಪ ಮಾಡುವುದು ಕೇಳಿಸುತ್ತದೆ. ಎಷ್ಟೆಲ್ಲ ಉತ್ಪನ್ನಗಳನ್ನು ದೇಶಿಯವಾಗಿಯೇ ಸಿದ್ದಪಡಿಸಲು ಸಾಧ್ಯವಿದೆಯೋ ಅಷ್ಟೆಲ್ಲ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆಯ ಮಹತ್ವವನ್ನು ದೇಶದ  ಜನತೆಗೆ ತಿಳಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ವಿದೇಶಿ ಉತ್ಪನ್ನಗಳ ಬಳಕೆಗೆ ತೀಲಾಂಜಲಿ ಇಡಿ. ದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ ನೀಡಿ ಎನ್ನುವುದಕ್ಕೆ ಆದ್ಯ ಗಮನ ನೀಡಿದ್ದಾರೆ. ಈಗಾಗಲೇ ಚೀನಾದ ಅನೇಕ ಉತ್ಪನ್ನಗಳ ಆಮದನ್ನು ಭಾರತ ನಿಷೇಧಿಸಿ ಆಗಿದೆ. ದೇಶದಲ್ಲೇ  ಅಗತ್ಯ ವಸ್ತುಗಳ ಉತ್ಪಾದನೆಗೂ ಗಮನ ಹರಿಸುವ ಕೆಲಸ  ನಡೆದಿದೆ. ಪ್ರಧಾನಿಗಳ ಸ್ವ್ವಾವಲಂಬಿ ಭಾರತ ನಿರ್ಮಾಣ ಕಾರ್ಯಕ್ಕೆ ದೇಶದ ಜನತೆ ಕೂಡ ಸಾಥ್ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಸ್ವಾವಲಂಭಿ ಭಾರತ ನಿರ್ಮಾಣ ವಿಷಯದಲ್ಲಿ ಜನತೆಯ ನಾಡಿ ಮಿಡಿತ ಅರಿತಿರುವ ಪ್ರಧಾನಿಗಳು  ತಮ್ಮ ಪ್ರತಿ ಭಾಷಣದಲ್ಲೂ ಈ ಬಗ್ಗೆ ಹೆಚ್ಚು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿಗಳ ದೇಶಿ ವಸ್ತುಗಳ ಉತ್ಪಾದನೆ ಮತ್ತು ಬಳಕೆಯ ಆದ್ಯತಾ ಪಟ್ಟಿಗೆ ಗುಳೇದಗುಡ್ಡದ ಖಣ ಮತ್ತು ಇಳಕಲ್ ಸೀರೆಗಳು ಸೇರಲಿ ಎನ್ನುವುದು ನೇಕಾರರ ಆಶಯವಾಗಿದೆ.

ಮೊನ್ನೆ ತಾನೇ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಉತ್ಪಾದನೆ ಆಗುವ ಕಿನ್ನಾಳ ಆಟಿಕೆ ಸಾಮಗ್ರಿಗಳ ಉತ್ಪಾದನೆಗೆ ಪ್ರೋತ್ಸಾಹ ಮತ್ತು ಮುಧೋಳ ತಳಿ ಶ್ವಾನಗಳ ಸಾಕಣೆಗೆ ಒತ್ತು ನೀಡುವ ಕುರಿತು ಮಾತನಾಡಿದ್ದಾರೆ. ಆ ಮೂಲಕ ದೇಶಿ ವಸ್ತುಗಳ ಬಳಕೆ  ಹೆಚ್ಚಿಸಿ ಸ್ವಾವಲಂಬನೆ ಮಂತ್ರ ಸಾಕಾರದ ಜಪ ಮಾಡಿದ್ದಾರೆ. ಮುಧೋಳ ದೇಶಿ ತಳಿ ಮುಧೋಳ ನಾಯಿಯನ್ನು ಪರಿಚಯಿಸುವ ಪ್ರಯತ್ನ ಮಾಡಿರುವ ಅವರು ಅಳಿವಿನ ಅಂಚಿನಲ್ಲಿರುವ ಗುಳೇದಗುಡ್ಡದ ಖಣ ಮತ್ತು ಇಳಕಲ್ ಸೀರೆಗಳ ವಿಷಯವನ್ನೂ ಪ್ರಸ್ತಾಪಿಸಿದ್ದರೆ ಚೆನ್ನಾಗಿರುತ್ತಿತ್ತು. ಗುಳೇದಗುಡ್ಡದ ಖಣ ಮತ್ತು  ಇಳಕಲ್‌ನ ಸೀರೆ ರಾಷ್ಟç ಮಟ್ಟದಲ್ಲಿ ತನ್ನದೇ ಆದ ಪ್ರಸಿದ್ದಿ ಪಡೆದುಕೊಂಡಿದ್ದವು. ದೇಶ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿದ್ದವು. 

ಇತ್ತೀಚಿನ ವರ್ಷಗಳಲ್ಲಿ ಎರಡೂ ಉತ್ಪನ್ನಗಳನ್ನು ಮಾರುಕಟ್ಟೆಗಳನ್ನು ಕಳೆದುಕೊಂಡಿವೆ. ಈ ಉತ್ಪನ್ನಗಳ ಉತ್ಪಾದನೆಯನ್ನು ವಂಶಪಾರಂಪರಿಕ ಉತ್ಪಾದಿಸಿಕೊಂಡು ಬಂದಿರುವ ನೇಕಾರರು ತಮ್ಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಂಡ ಪರಿಣಾಮ ಬದುಕನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಗುಳೇದಗುಡ್ಡದ ಖಣ ಮತ್ತು ಇಳಕಲ್ ಸೀರೆಗಳಿಗೆ ಬೇಡಿಕೆ ಕಡಿಮೆ ಆಗಿದ್ದರಿಂದ ಕಳೆದೊಂದು ದಶಕದಲ್ಲಿ ಇವುಗಳ ಉತ್ಪಾದನೆಯೂ ಕಡಿಮೆ ಆಗಿದೆ. ನೇಕಾರರು ಪರ್ಯಾಯ ಉದ್ಯೋಗದತ್ತ ಮನಸ್ಸು ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್, ಅಮೀನಗಡ, ಸುಳೇಭಾವಿ, ಕಮತಗಿ, ಗುಳೇದಗುಡ್ಡ, ಕೆರೂರ,  ನೆರೆಯ ಜಿಲ್ಲೆ ಕೊಪ್ಪಳದ ದೋಟಿಹಾಳ, ಹನಮಸಾಗರ, ಬೆಳಗಾವಿ ಜಿಲ್ಲೆಯ ರಾಮದುರ್ಗ, ಮುದಕವಿ, ಸುರೇಬಾನ ಮತ್ತು ಕಟಕೋಳ ಪ್ರದೇಶಗಳಲ್ಲಿ ಬಹುತೇಕ ನೇಕಾರರು ಗುಳೇದಗುಡ್ಡದ ಖಣ ಮತ್ತು ಇಳಕಲ್ ಸೀರೆ ನೇಯುತ್ತಿದ್ದರು. ಇಂದು ಈ ಪ್ರದೇಶಗಳಲ್ಲಿ ಖಣ ಮತ್ತು ಇಳಕಲ್ ಸೀರೆ ನೇಯುವ ನೇಕಾರರನ್ನು  ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಹಿರಿಯ ನೇಕಾರರು ಮಾತ್ರ ಅನ್ಯ ಮಾರ್ಗವಿಲ್ಲದೇ ಇನ್ನೂ ಇವುಗಳ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ. ಯುವ ನೇಕಾರ ಸಮೂಹ ಇತರ ಉದ್ಯೋಗಳನ್ನು ಚಿತ್ತ ಹರಿಸಿದ್ದಾರೆ. ಅಳಿವಿನ ಅಂಚಿನಲ್ಲಿರುವ ಗುಳೇದಗುಡ್ಡ ಖಣ ಮತ್ತು ಇಳಕಲ್ ಸೀರೆಯ ಪಾರಂಪರಿಕ  ಸಂಸ್ಕೃತಿಯನ್ನು ಉಳಿಸುವ ಮೂಲಕ ದೇಶಿ ಉತ್ಪನ್ನಗಳ ರಕ್ಷಣೆ ಹಾಗೂ ಇವುಗಳನ್ನು ಅವಲಂಬಿಸಿ ಬದುಕು ಸಾಗಿಸುತ್ತಿರುವ ನೇಕಾರರ ಕುಟುಂಬಗಳ ನೆರವಿಗೆ ಸರ್ಕಾರ ಮುಂದಾಗಬೇಕಿದೆ.

ಈ ಮೊದಲು ಕರ್ನಾಟಕ, ಮಹಾರಾಷ್ಟç, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನಡೆಯುವ ಮದುವೆ, ಮುಂಜುವೆ ಸೇರಿದಂತೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಳೇದಗುಡ್ಡ ಖಣ ಮತ್ತು ಇಳಕಲ್ ಸೀರೆಗಳಿಗೆ ಅಗ್ರಸ್ಥಾನ  ಲಭ್ಯವಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಜಾಗತಿಕರಣದ ಫಲವಾಗಿ ಇವುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸ್ವಾವಲಂಬಿ ಭಾರತ ನಿರ್ಮಾಣ ಆಂದೋಲನದ ಮೂಲಕ ದೇಶಿ ಉತ್ಪನ್ನಗಳಾಗಿರುವ ಖಣ ಮತ್ತು ಇಳಕಲ್ ಸೀರೆಗೂ ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯ  ಮಾರುಕಟ್ಟೆಯನ್ನು ಕಲ್ಪಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಭವಿಷ್ಯದ ದಿನಗಳಲ್ಲಿ ಪ್ರಧಾನಿಗಳು ಗುಳೇದಗುಡ್ಡದ ಖಣ ಮತ್ತು ಇಳಕಲ್ ಸೀರೆಗಳ ಮಹತ್ವವನ್ನು ದೇಶವಾಸಿಗಳಿಗೆ ಪರಿಚಯಿಸುವ ಕೆಲಸ ಮಾಡಿದಲ್ಲಿ ಅಷ್ಟರ ಮಟ್ಟಿಗೆ ನೇಕಾರರಿಗೆ ನೆರವು ಹಾಗೂ ಬಹುದೊಡ್ಡ ಪ್ರಮಾಣದಲ್ಲಿ ಯುವ ನೇಕಾರರಿಗೆ  ಸ್ವಯಂ ಉದ್ಯೋಗ ಕಲ್ಪಿಸಿದಂತಾಗಲಿದೆ ಎನ್ನುವುದು ಹಿರಿಯ ನೇಕಾರ ಜೀವಿಗಳ ಅಭಿಮತವಾಗಿದೆ.

-ವಿಠ್ಠಲ ಆರ್. ಬಲಕುಂದಿ

Related Stories

No stories found.

Advertisement

X
Kannada Prabha
www.kannadaprabha.com