ಕೋವಿಡ್-19 ಸೋಂಕಿನಿಂದ ಪೊಲೀಸ್ ಕಾನ್ಸ್ ಟೇಬಲ್ ಸಾವು: ವೈದ್ಯರ ಮೇಲೆ ಸಂಬಂಧಿಕರ ಹಲ್ಲೆ

 ಕೋವಿಡ್-19 ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಸಾವನ್ನಪ್ಪಿದ್ದರಿಂದ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಆರೋಪಿಸಿ ಮೃತ ಪೊಲೀಸ್ ಕಾನ್ಸ್ ಟೇಬಲ್  ಸಂಬಂಧಿಕರು ಕರ್ತವ್ಯನಿರತ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದ ಕೋವಿಡ್-19 ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ. 
ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು
ಹಲ್ಲೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು

ಕೊಪ್ಪಳ: ಕೋವಿಡ್-19 ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಸಾವನ್ನಪ್ಪಿದ್ದರಿಂದ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಆರೋಪಿಸಿ ಮೃತ ಪೊಲೀಸ್ ಕಾನ್ಸ್ ಟೇಬಲ್  ಸಂಬಂಧಿಕರು ಕರ್ತವ್ಯನಿರತ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದ ಕೋವಿಡ್-19 ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ.

ಇದಕ್ಕೆ ಪ್ರತಿಯಾಗಿ ಆಸ್ಪತ್ರೆಯ ಸಿಬ್ಬಂದಿ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ರಾತ್ರೋರಾತ್ರಿ ತುಂತುರು ಮಳೆಯಲ್ಲೂ ಗುಂಪಾಗಿ ನಿಂತಿದ್ದ ವೈದ್ಯರು, ಹಲ್ಲೆ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಕೋವಿಡ್-19 ಸೋಂಕು ದೃಢಪಟ್ಟಿದ್ದರಿಂದ ಆಗಸ್ಟ್ 26ರಂದು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೊಪ್ಪಳ ನಗರ ಠಾಣೆಯ ಕಾನ್ಸ್ ಟೇಬಲ್ ರಾಮಣ್ಣ ಎಚ್.ಸಿ. ಬುಧವಾರ ಮಧ್ಯಾಹ್ನದವರೆಗೂ ಚನ್ನಾಗೇ ಇದ್ದರು. ಸಂಜೆ ಹೊತ್ತಿಗೆ ಅವರನ್ನು ನೋಡಲು ಬಂದಾಗ ಅವರು ಮೃತಪಟ್ಟ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.ಈ ವಿಷಯವನ್ನು ಮನೆಯವರಿಗೆ ಫೋನ್ ಮೂಲಕ ತಿಳಿಸಬೇಕು ಎನ್ನುವ ಕನಿಷ್ಠ ಕಾಳಜಿಯೂ ಆಸ್ಪತ್ರೆ  ಸಿಬ್ಬಂದಿಗೆ ಇರದಿದ್ದಕ್ಕೆ ಸಂಬಂಧಿಕರು ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. 

ಹಲ್ಲೆ ಘಟನೆಯಿಂದ ಆಕ್ರೋಶಗೊಂಡ ಆಸ್ಪತ್ರೆ ಸಿಬ್ಬಂದಿ ರಾತ್ರೋರಾತ್ರಿ ದಿಢೀರ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು ಹಿಡಿದರು.ಸ್ಥಳಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಭೇಟಿ ನೀಡಿ ಎಫ್ಐಆರ್ ದಾಖಲಿಸುವಂತೆ ಸೂಚಿಸಿದರು.ಪೊಲೀಸರ ಸಮ್ಮುಖದಲ್ಲೇ ಘಟನೆ ನಡೆದಿದ್ದು ಸುಮ್ಮನೇ ಇದ್ದ ಪೊಲೀಸರ ವಿರುದ್ಧವೂ ಕ್ರಮ ಆಗಬೇಕೆಂದು  ಪ್ರತಿಭಟನಾನಿರತರು ಒತ್ತಾಯಿಸಿದರು. 

ಈ ಸಂದರ್ಭ ಮಾತನಾಡಿದ ಹಲ್ಲೆಗೊಳಗಾದ ವೈದ್ಯ ಡಾ.ವೀರೇಶ್, ರೋಗಿ   ಮೃತಪಟ್ಟ ತಕ್ಷಣ ಅವರು ಕೊಟ್ಟಿದ್ದ  ನಂಬರ್ ಗೆ ಹಲವು ಬಾರಿ ಕರೆ ಮಾಡಿದರೂ ಕರೆ ಹೋಗಲಿಲ್ಲ. ಇದಕ್ಕೆ ಸಾಕ್ಷ್ಯಗಳಿವೆ. ಆದರೂ ಏಕಾಏಕಿ ಮೃತರ ಸಂಬಂಧಿಕರು ಹಲ್ಲೆ ನಡೆಸಿದರು. ಈ ವೇಳೆ ಪೊಲೀಸರೂ ಸಹ ಇದ್ದರೂ ಹಲ್ಲೆ ಮಾಡುತ್ತಿರುವುದನ್ನು ನಿಂತು ನೋಡಿದರಷ್ಟೇ.ಅವರ ವಿರುದ್ಧವೂ ಕ್ರಮ ಆಗಬೇಕು. ಇನ್ನೊಮ್ಮೆ ಆಸ್ಪತ್ರೆಯಲ್ಲಿ ಇಂಥ ಘಟನೆಗಳು ಮರುಕಳಿಸಬಾರದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. 

ಸುಮಾರು 4 ಗಂಟೆಗಳ ಕಾಲ ಆಸ್ಪತ್ರೆ  ಸಿಬ್ಬಂದಿ ಪ್ರತಿಭಟನೆಯಲ್ಲಿ ತೊಡಗಿದ್ದರು.ಜಿಲ್ಲಾಧಿಕಾರಿ ಸುಮಾರು ಒಂದು ಗಂಟೆ ಕಾಲ ಪ್ರತಿಭಟನಾನಿರತ ವೈದ್ಯರ  ಮನವೊಲಿಸುವ ಪ್ರಯತ್ನ ಮಾಡಿದರು.ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಆವರಣದಲ್ಲಿ ಮತ್ತಷ್ಟೂ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಘಟನೆ ಕುರಿತು ಎಫ್ಐಆರ್ ದಾಖಲಿಸುವುದಾಗಿ ವೈದ್ಯ ಸಿಬ್ಬಂದಿ ತಿಳಿಸಿದ್ದಾರೆ.

ವರದಿ: ಬಸವರಾಜ ಕರುಗಲ್
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com