ಬೆಳಗಾವಿ:ಈ ಗ್ರಾಮ ಪ್ರತಿದಿನ ಶಿಕ್ಷಕರ ದಿನವನ್ನು ಆಚರಿಸುತ್ತದೆ. ಇದು ಬೆಳಗಾವಿ ಜಿಲ್ಲೆಯ ಇಂಚಲ್ ಗ್ರಾಮ, ಶಿಕ್ಷಕರ ಗ್ರಾಮವೆಂದೇ ಕರೆಯಬಹುದು. ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಠ ಒಬ್ಬರು ಶಿಕ್ಷಕರಿದ್ದಾರೆ.
ಬೆಳಗಾವಿ ಜಿಲ್ಲೆಯ ಸೌಂದತ್ತಿ ತಾಲ್ಲೂಕಿನ ಇಂಚಲ್ ಗ್ರಾಮದಲ್ಲಿ ಸುಮಾರು 10 ಸಾವಿರ ಮಂದಿ ಇದ್ದಾರೆ, ಅವರಲ್ಲಿ ಸುಮಾರು 900 ಮಂದಿ ಶಿಕ್ಷಕರೇ. ಸರ್ಕಾರ ಮತ್ತು ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ನೂರಾರು ಮಂದಿ ಬಿ.ಎಡ್ ಕೋರ್ಸ್ ಮಾಡಿಕೊಂಡು ಹುದ್ದೆಗೆ ಕಾಯುತ್ತಿದ್ದಾರೆ.
ಕೆಲವು ದಶಕಗಳ ಹಿಂದೆ ಇಂಚಲ್ ಗ್ರಾಮ ಹಿಂದುಳಿದಿತ್ತು, ಇದು ಡಕಾಯಿತರು, ಕೊಲೆಗಾರರು, ಕ್ರಿಮಿನಲ್ ಚಟುವಟಿಕೆಗಳಿಗೆ ಸ್ವರ್ಗವಾಗಿತ್ತು, ಶಿಕ್ಷಣ ಎಂಬುದು ಇಲ್ಲಿ ಮರೀಚಿಕೆಯಾಗಿತ್ತು. ಆದರೆ ಸಮಯ ಕಳೆದಂತೆ ಎಲ್ಲವೂ ಬದಲಾಯಿತು. ಇಂಚಲ್ ಮಠದ ಮುಖ್ಯಸ್ಥ ಶಿವಾನಂದ ಭಾರತಿ ಮತ್ತೆ ಮೂವರು ಶಿಕ್ಷಕರೊಂದಿಗೆ 1975ರಲ್ಲಿ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಗ್ರಾಮದ ಪ್ರತಿ ಮಗುವಿಗೆ ಶಿಕ್ಷಣ ಕೊಡಿಸುವುದು ಅವರ ಉದ್ದೇಶವಾಗಿತ್ತು.
1975ರಲ್ಲಿ ಹೈಸ್ಕೂಲ್ ಸ್ಥಾಪನೆಯಾಯಿತು, 1982ರಲ್ಲಿ ಪದವಿ ಪೂರ್ವ ಕಾಲೇಜು ಮತ್ತು 1985ರಲ್ಲಿ ಡಿ ಎಡ್ ಕಾಲೇಜು ಸ್ಥಾಪನೆಯಾದವು. ಆರಂಭದಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದರು. ಆದರೆ ಇಂದು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಗ್ರಾಮದ ಶಿಕ್ಷಕ ಸತಾರ್ ಇಸ್ಮಾಯಿಲ್ ಸಾಬ್, ಶಿವಾನಂದ ಭಾರತಿ ಸ್ವಾಮೀಜಿ ಅಂದು ಗ್ರಾಮದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದರು. ಸವಾಲಾಗಿ ಒಂದು ವಿಷಯವನ್ನು ತೆಗೆದುಕೊಂಡರೆ ಸಮಾಜದಲ್ಲಿ ಕ್ರಾಂತಿಯನ್ನುಂಟುಮಾಡಬಹುದು ಎಂಬುದಕ್ಕೆ ಶಿವಾನಂದ ಭಾರತಿ ಸ್ವಾಮೀಜಿಯೇ ಸಾಕ್ಷಿ ಎನ್ನುತ್ತಾರೆ.
Advertisement