ಸಂಜನಾ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ: ಪ್ರಶಾಂತ್ ಸಂಬರಗಿ
ಬೆಂಗಳೂರು: ಸ್ಯಾಂಡಲ್ ವುಡ್ ಗೆ ನಶೆಯ ನಂಟು ಪ್ರಕರಣಕ್ಕೆ ಸಂಬಂಧಿಸಿ, ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಸಿಸಿಬಿಯಿಂದ ಬಂಧಿತರಾಗಿ ಸಾಂತ್ವನ ಕೇಂದ್ರದಲ್ಲಿದ್ದಾರೆ.
ಮತ್ತಷ್ಟು ನಟ, ನಟಿಯರ ಹಾಗೂ ಗಣ್ಯಾತಿಗಣ್ಯರ ಮಕ್ಕಳು ಕೇಸ್ ನಲ್ಲಿ ಲಾಕ್ ಆಗುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದೇ ವೇಳೆ ನಟಿ ಸಂಜನಾ ಗಲ್ರಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಚಲನಚಿತ್ರ ವಿತರಕ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
'ನಾನು ಸಂಜನಾ ಹೆಸರನ್ನೇ ತೆಗೆದುಕೊಂಡಿರಲಿಲ್ಲ. ಆದರೆ, ಅವರೇ ಕುಂಬಳಕಾಯಿ ಕಳ್ಳ ಎನ್ನುವಂತೆ ಹಂದಿ, ನಾಯಿ ಅಂತೆಲ್ಲ ಮಾತನಾಡಿದ್ದಾರೆ. ಚಪ್ಪಲಿಯಲ್ಲಿ ಹೊಡಿತೀನಿ, ರೋಡಲ್ಲಿ ಹೊಡಿತೀನಿ ಅಂತೆಲ್ಲ ಹೇಳಿದ್ದಾರೆ. ನಾನು ಉತ್ತರ ಕರ್ನಾಟಕದ ನಿವಾಸಿ, ಬೆಳಗಾವಿಯವನು ನಾನು. ನನ್ನ ಬಂಧುಗಳು, ನನ್ನ ಸಂಬರಗಿ ಕುಟುಂಬ ದೊಡ್ಡದು. ಹಾಗಾಗಿ, ಸಂಜನಾ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತಿದ್ದೇವೆ' ಎಂದು ಹೇಳಿದ್ದಾರೆ.
ಪ್ರಶಾಂತ್ ಸಂಬರಗಿ ಅವರು ನೇರವಾಗಿ ಸಂಜನಾ ಅವರ ಹೆಸರು ಹೇಳದೇ ಪರೋಕ್ಷವಾಗಿ ನಟಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಆದರೆ, ಸಂಜನಾ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು. ಅಲ್ಲದೆ ಪ್ರಶಾಂತ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದರ ವಿರುದ್ಧ ಪ್ರಶಾಂತ್ ಕಾನೂನಿನ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ.