ವಿಜಯಪುರ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ ಕರ್ನಾಟಕಕ್ಕೆ ಸರಬರಾಜಾಗುತ್ತಿದ್ದ ಆಕ್ಸಿಜನ್ ಸಿಲಿಂಡರ್ ಗಳ ಮೇಲೆ ನಿಯಂತ್ರಣ ಹೇರಿ ಕಡಿತಗೊಳಿಸಿದ್ದು, ಇದರಿಂದ ಉತ್ತರ ಕರ್ನಾಟಕದ ಭಾಗದ ಆಸ್ಪತ್ರೆಗಳಲ್ಲಿ ಆಕ್ಸಿಜನೆ ಕೊರೆತೆಯುಂಟಾಗುವ ಭೀತಿ ಆರಂಭವಾಗಿದೆ.
ಪ್ರಮುಖವಾಗಿ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಆಕ್ಸಿಜನ್ ಕೊರತೆ ಭೀತಿ ಆವರಿಸಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಎಲ್ಲ ಆಸ್ಪತ್ರೆಗಳು ಕೊವಿಡ್ ಕೇರ್ ಸೆಂಟರ್ ಗಳಾಗಿ ಬದಲಾಗಿದ್ದು, ಇದೇ ಕಾರಣಕ್ಕೆ ಇಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗಿರುವುದರಿಂದ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರನ್ನು ಮಹಾರಾಷ್ಟ್ರದ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿ ರವಾನಿಸಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ 36 ಕೋವಿಡ್ ಕೇರ್ ಸೆಂಟರ್ ಗಳನ್ನು ನಡೆಸುತ್ತಿರುವ ಬಂಜಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ದೀಪಕ್ ಚೌಹ್ವಾಣ್ ಅವರು ಮಾತನಾಡಿದ್ದು, ಈ ಪ್ರದೇಶದ ಬಹುತೇಕ ಆಸ್ಪತ್ರೆಗಳು ಮಹಾರಾಷ್ಟ್ರದ ಸೋಲಾಪುರ ಮತ್ತು ಕೊಲ್ಹಾಪುರದಲ್ಲಿನ ಆಮ್ಲಜನಕ ಘಟಕಗಳನ್ನು ಅವಲಂಬಿಸಿವೆ. ಅಲ್ಲಿಂದಲೇ ಇಲ್ಲಿಗೆ ಆಮ್ಲಜನಕದ ಸಿಲಿಂಡರ್ ಗಳು ಸರಬರಾಜಾಗುತ್ತಿದ್ದವು. ಆದರೆ ಇದೀಗ ಸಿಲಿಂಡರ್ ಗಳ ಸಂಖ್ಯೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ಈಗ, ನಾವು ಆಮ್ಲಜನಕದ ಅಗತ್ಯವಿಲ್ಲದ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಬಂಗಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಮುಖ್ಯಸ್ಥ ಡಾ.ರಿಹಾನ್ ಬಂಗಿ ಅವರು, ನಮ್ಮ ಆಸ್ಪತ್ರೆಗೆ 47 ಮಂದಿ ಸೋಂಕಿತರು ದಾಖಲಾಗಿದ್ದರು. ಈ ಪೈಕಿ 12 ಮಂದಿ ಗಂಭೀರ ಸ್ಥಿತಿಯಲ್ಲಿದ್ದರು. ಓರ್ವ ರೋಗಿಗೆ ಪ್ರತೀ ಒಂದು ಗಂಟೆಗೆ ಒಂದು ಆಕ್ಸಿಜನ್ ಸಿಲಿಂಡರ್ ಬೇಕಾಗುತ್ತದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಸಿಲಿಂಡರ್ ಗಳು ಖಾಲಿಯಾಗುತ್ತಾ ಬಂದಿವೆ. ಅತ್ತ ಆಸ್ಪತ್ರೆಗೆ ಬರಬೇಕಿದ್ದ ಸಿಲಿಂಡರ್ ಲೋಡ್ ಗಳ ವಾಹನಗಳು ಸೋಲಾಪುರದಲ್ಲಿ ಸಿಲುಕಿಕೊಂಡಿವೆ. ಹೀಗಾಗಿ ಸಿಲಿಂಡರ್ ಗಳಿಗಾಗಿ ಗುಲ್ಬರ್ಗಾ ಮತ್ತು ರಾಯಚೂರಿಗೆ ವಾಹನಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಉತ್ತರ ಕರ್ನಾಟಕದ ಆಸ್ಪತ್ರೆಗಳು ಆಕ್ಸಿಜನ್ ಸಿಲಿಂಡರ್ ಗಳಿಗಾಗಿ ಬಳ್ಳಾರಿಯನ್ನು ಅವಲಂಬಿಸುವಂತಾಗಿದೆ. ಉತ್ತರ ಕರ್ನಾಟಕ ಪ್ರದೇಶಕ್ಕೆ ವೈದ್ಯಕೀಯ ಸಲಕರಣೆಗಳ ಪ್ರಮುಖ ಪೂರೈಕೆದಾರರಾದ ಬಳ್ಳಾರಿಯಲ್ಲಿರುವ ಜೆಎಸ್ಡಬ್ಲ್ಯೂ ಪ್ರಾಕ್ಸಿಯಾ ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ (ಜೆಪಿಪಿಎಲ್) ನಿಂದ ಆಕ್ಸಿಜನ್ ಸಿಲಿಂಡರ್ ಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ಪೂರೈಕೆದಾರರೊಬ್ಬರು ಮಾತನಾಡಿ, 'ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ, ಆದರೆ ಉತ್ಪಾದನೆ ಪ್ರಮಾಣ ಮಾತ್ರ ಹಾಗೆಯೇ ಇದೆ. ಬಾಗಲಕೋಟೆಯಲ್ಲಿ ಮಾತ್ರವೇ ಪ್ರತಿದಿನ ಕನಿಷ್ಠ ಆರು ಟನ್ ಆಮ್ಲಜನಕದ ಅಗತ್ಯವಿದೆ, ಆದರೆ ನಾವು ಬಳ್ಳಾರಿಯಿಂದ ಕೇವಲ ನಾಲ್ಕು ಟನ್ ಆಕ್ಸಿಜನ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಆಕ್ಸಿಜನ್ ಕೊರತೆ ಕುರಿತು ಹೇಳಿಕೆ ನೀಡಿರುವ ವಿಜಯಪುರ ಉಪ ಆಯುಕ್ತ ಪಿ ಸುನಿಲ್ ಕುಮಾರ್ ಅವರು, ನಾನು ಕೊಲ್ಹಾಪುರದ ಜಿಲ್ಲಾಧಿಕಾರಿಗಳೊಂದಿಗೆ ಆಮ್ಲಜನಕ ಪೂರೈಕೆಗೆ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದೇನೆ. ಆಕ್ಸಿಜನ್ ಸಿಲಿಂಡರ್ ಸರಬರಾಜು ಮೇಲೆ ನಿಯಂತ್ರಣ ಹೇರಿದ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಆಘಾತಕಾರಿ. ಸಾಂಕ್ರಾಮಿಕದ ನಡುವೆ ಮಹಾರಾಷ್ಟ್ರವು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳು ಈಗ ಧಾರವಾಡ, ಕಲಬುರಗಿ, ಬಲ್ಲಾರಿ ಮತ್ತು ಕರ್ನಾಟಕ ಕೈಗಾರಿಕಾ ಅನಿಲಗಳ ಖಾಸಗಿ ಲಿಮಿಟೆಡ್ನಲ್ಲಿ ಪೂರೈಕೆದಾರರನ್ನು ಸಂಪರ್ಕಿಸುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದಾಗಿ ನಾವು ತೀವ್ರ ಒತ್ತಡದಲ್ಲಿದ್ದೇವೆ. ನಾನು ಇದನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಉನ್ನತ ಮಟ್ಟದವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
Advertisement