ಬೆಂಗಳೂರು: ಗುಡಿಸಲಿನಲ್ಲಿರುವವರಿಗೆ ಮುಂದಿನ ವರ್ಷ ಜೂನ್ ತಿಂಗಳೊಳಗೆ ಮನೆಗಳನ್ನು ನಿರ್ಮಾಣ ಮಾಡದೇ ಹೋದಲ್ಲಿ ಸಚಿವ ಸ್ಥಾನದಲ್ಲಿಯೇ ಇರುವುದಿಲ್ಲ ಎಂದು ವಸತಿ ಸಚಿವ ಸೋಮಣ್ಣ ಅವರು ಹೇಳಿದ್ದಾರೆ.
ಬುಧವಾರ ಮನೆ ನಿರ್ಮಿಸಲಿರುವ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸರ್ಕಾರಿ ಭೂಮಿ ಮಂಜೂರಾತಿ ಹಾಗೂ ಹಸ್ತಾಂತರ ಕುರಿತು ಆಗಿರುವ ಪ್ರಗತಿ ಪರಿಶೀಲನೆ ನಡೆಸಿದ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಬಡವರಿಗೆ ಮನೆ ನೀಡುವ ಒಂದು ಲಕ್ಷಣ ಮನೆ ನಿರ್ಮಾಣ ಯೋಜನೆಯಡಿ 43 ಸಾವಿರ ಮನೆ ನಿರ್ಮಾಣ ನಡೆಯುತ್ತಿದ್ದು, ಜೂನ್ ಒಳಗಾಗಿ 25 ಸಾವಿರ ಮನೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಒಟ್ಟಾರೆ ಮನೆ ನಿರ್ಮಾಣಕ್ಕೆ 900 ಎಕರೆ ಭೂಮಿ ದೊರೆತಿದೆ. ಕಂದಾಯ ಸಚಿವರ ಜೊತೆಗೂ ಈ ಸಂಬಂಧ ಮಾತುಕತೆ ನಡೆಸಲಾಗಿದೆ. ಬಡವರು, ಗುಡಿಸಲಿನಲ್ಲಿ ಇರುವವರಿಗೆ ಮನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇಚ್ಛಾಶಕ್ತಿ ಇದ್ದರೆ ಮಾತ್ರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯ. ಜೂನ್ ಒಳಗೆ 25 ಸಾವಿರ ಮನೆಗಳನ್ನು ನಿರ್ಮಾಣ ಮಾಡದಿದ್ದರೆ ಸಚಿವ ಸ್ಥಾನದಲ್ಲಿರುವುದಿಲ್ಲ. ಅಧಿಕಾರಿಗಳು ಈ ಕೆಲಸ ಮಾಡದಿದ್ದರೆ ಅದರ ಹೊಣೆ ನಾನೇ ಹೊರತ್ತೇನೆಂದಿದ್ದಾರೆ.
Advertisement