ಬಾಗಲಕೋಟೆ: ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿಬಂದಿರುವ ವಿಚಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಒಂದು ದೇಶ ಮತ್ತೊಂದು ದೇಶದ ಬಗ್ಗೆ ಗೂಢಾಚಾರಿಕೆ ಮಾಡುವುದೇ ತಪ್ಪು ಎಂದಿದ್ದಾರೆ.
ಸೋಮವಾರದಿಂದ ತಮ್ಮ ಕ್ಷೇತ್ರ ಬಾದಾಮಿಯಲ್ಲಿ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ, ಎರಡನೇ ದಿನವಾದ ಇಂದು ಕೂಡ ಪ್ರವಾಸ ಮುಂದುವರಿಸಿದ್ದು, ಪಟ್ಟಣದಲ್ಲಿ ಕುಡಿಯುವ ನೀರಿನ ಕಾಮಗಾರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಅಧಿಕಾರಿಗಳ ಜೊತೆ ಕಾಮಗಾರಿ ಬಗ್ಗೆ ಚರ್ಚಿಸಿದರು ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಹೆಚ್.ಡಿ.ದೇವೇಗೌಡ ಹೆಸರು ಕೇಳಿಬಂದಿದೆ. ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಚೀನಾ ಬೇಹುಗಾರಿಕೆ ಪಟ್ಟಿಯಲ್ಲಿ ನನ್ನ ಹೆಸರು ಕೇಳಿ ಬಂದಿದ್ದು, ವಿದೇಶಿ ಬೇಹುಗಾರಿಕೆಯನ್ನು ಕೇಂದ್ರ ಸರ್ಕಾರ ಹತ್ತಿಕ್ಕಬೇಕು. ಅಂತವರನ್ನು ಪತ್ತೆ ಹಚ್ಚಿ ಬಲಿಹಾಕಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇನ್ನು ಶಿರಾ ಉಪಚುನಾವಣೆಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಶಿರಾ ಬೈ ಎಲೆಕ್ಷನ್ ವಿಚಾರದ ಬಗ್ಗೆ ನಾವಿನ್ನೂ ಚರ್ಚೆ ಮಾಡಿಲ್ಲ, ನಾಳೆ ಈ ಕುರಿತು ಸಭೆ ಕರೆದಿದ್ದೇವೆ. ಸಭೆಯಲ್ಲಿ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗಳ್ಳುತ್ತೇವೆ ಎಂದು ಹೇಳಿದರು.
Advertisement