ಮೂರು ಹಂತಗಳಲ್ಲಿ ಘನತ್ಯಾಜ್ಯ ನಿರ್ವಹಣೆ: ಮಾದರಿ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ವಾರ್ಡ್ ಗೋವಿಂದರಾಜನಗರ

ಬೆಂಗಳೂರಿನ ಕೀರ್ತಿಗೆ ಅಪವಾದದಂತಿರುವ ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಗೋವಿಂಜರಾಜನಗರ ವಾರ್ಡ್ ಮಾದರಿ ಮತ್ತು ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಈ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ವಾರ್ಡ್ ಎಂಬ ಕೀರ್ತಿಗೆ ಭಾಜನವಾಗಿದೆ.
ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್
ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್

ಬೆಂಗಳೂರು: ಬೆಂಗಳೂರಿನ ಕೀರ್ತಿಗೆ ಅಪವಾದದಂತಿರುವ ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಗೋವಿಂಜರಾಜನಗರ ವಾರ್ಡ್ ಮಾದರಿ ಮತ್ತು ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಈ ವ್ಯವಸ್ಥೆ ಅಳವಡಿಸಿಕೊಂಡ ಮೊದಲ ವಾರ್ಡ್ ಎಂಬ ಕೀರ್ತಿಗೆ ಭಾಜನವಾಗಿದೆ.

ಹೌದು.. ಹೊಸ ಘನತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ವಿಧಾನ ಅನುಸರಿಸುವ ಮೂಲಕ  ಈ ವಿಧಾನವನ್ನು ಅನುಸರಿಸಿದ ಮೊದಲ ವಾರ್ಡ್ ಎಂಬ ಕೀರ್ತಿಗೆ ಗೋವಿಂದರಾಜನಗರ ನಗರದ ವಾರ್ಡ್ ನಂಬರ್ 104 ಪಾತ್ರವಾಗಿದೆ. ಈ ಮಾದರಿ ವಿಧಾನದಲ್ಲಿ ತ್ಯಾಜ್ಯವನ್ನು ಸಾಗಣೆ ಮತ್ತು ವಿಲೇವಾರಿಗೆ ಮುನ್ನ ಆರ್ದ್ರ  (ಹಸಿ ಕಸ), ಶುಷ್ಕ (ಒಣ ಕಸ) ಮತ್ತು ನೈರ್ಮಲ್ಯ (ಸ್ಯಾನಿಟರಿ) ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಬಳಿಕ ಈ ಕಸವನ್ನು ಆಟೋ ಟಿಪ್ಪರ್ ಲಾರಿಗಳಲ್ಲಿ ಮುಚ್ಚಿದ ಕಂಟೈನರ್ ಗಳಲ್ಲಿ ಸಾಗಿಸಲಾಗುತ್ತದೆ. ಈ ಟಿಪ್ಪರ್ ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದ್ದು, ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ  ದೃಷ್ಟಿಯಿಂದ ಈ ಲಾರಿಗಳು ಹಲವು ಬಾರಿ ವಾರ್ಡ್ ಗೆ ಪ್ರಯಾಣ ಮಾಡುತ್ತದೆ. ಒಮ್ಮೆ ಆರ್ದ್ರ ಕಸ, ಮತ್ತೆ ಶುಷ್ಕ ಕಸ ಮತ್ತು ನೈರ್ಮಲ್ಯ ಕಸಗಳನ್ನು ಈ ಮೂಲಕ ವಿಂಗಡನೆ ಮಾಡುತ್ತದೆ.

ಮಂಗಳವಾರದಿಂದ ಈ ನೂತನ ವಿಧಾನವನ್ನು ಅಳವಡಿಸಲಾಗಿದ್ದು, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಕಸ ವಿಲೇವಾರಿಯ ಹೊಸ ವಿಧಾನ ಅಳವಡಿಕೆಯ ಸಿದ್ಧತೆಗಳನ್ನು  ಪರಿಶೀಲಿಸಿದರು. ಮೂಲಗಳ ಪ್ರಕಾರ ಈ ವಾರ್ಡ್‌ ಅನ್ನು 12 ಘಟಕಗಳನ್ನಾಗಿ (ಬ್ಲಾಕ್‌) ವಿಂಗಡಿಸಲಾಗಿದ್ದು, ಈ ಎಲ್ಲ  ಘಟಕಗಳಲ್ಲೂ ಮನೆಮನೆಯಿಂದ ಕಸ ಸಂಗ್ರಹಿಸುವುದಕ್ಕೆ ಸಮಯ ನಿಗದಿಪಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ನಿತ್ಯವೂ ಹಸಿ ಹಾಗೂ ನೈರ್ಮಲ್ಯ ಕಸಗಳನ್ನು ನಿತ್ಯವೂ ಸಂಗ್ರಹಿಸಲಾಗುತ್ತದೆ. ಒಣ ಕಸವನ್ನು ವಾರದಲ್ಲಿ ಎರಡು ಬಾರಿ ಸಂಗ್ರಹಿಸಲಾಗುತ್ತದೆ. ಕಸ ವಿಂಗಡಣೆಯನ್ನು ಸಮರ್ಪಕವಾಗಿ ಮಾಡದವರಿಗೆ  ದಂಡ ವಿಧಿಸುವ ಅಧಿಕಾರವನ್ನು ಕಿರಿಯ ಆರೊಗ್ಯ ಪರಿವೀಕ್ಷಕರಿಗೆ ಹಾಗೂ ಮಾರ್ಷಲ್‌ ಸಿಬ್ಬಂದಿಗೆ ವಹಿಸಲಾಗಿದೆ.

ಕಸ ವಿಲೇವಾರಿಗೆ ಆಟೊ ಟಿಪ್ಪರ್‌ಗಳನ್ನು ಬಳಸಲಾಗುತ್ತಿದೆ. ಕಸ ವಿಲೇವಾರಿ ಮೇಲೆ ನಿಗಾ ಇಡುವುದಕ್ಕಾಗಿ ಈ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ವಾಹನಗಳಲ್ಲಿ ಆಯಾ ಬ್ಲಾಕ್‌ಗಳ ಸಂಖ್ಯೆಯನ್ನೂ ನಮೂದಿಸಲಾಗುತ್ತದೆ. ಆಟೊ ಟಿಪ್ಪರ್‌ಗಳ ಚಾಲಕರು, ಸಹಾಯಕರು ಸೇರಿದಂತೆ ಕಸ ವಿಲೇವಾರಿ  ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿ ಸಮವಸ್ತ್ರಗಳನ್ನು ಹಾಗೂ ಎಲ್ಲರೀತಿಯ ಸುರಕ್ಷತಾ ಪರಿಕರಗಳನ್ನು ಧರಿಸಿರಬೇಕು ಎಂದು ಸೂಚಿಸಲಾಗಿದೆ. ಮಸ್ಟರಿಂಗ್‌ ಕೇಂದ್ರಗಳಲ್ಲಿ ಬಯೋಮೆಟ್ರಿಕ್‌ ವಿಧಾನದ ಮೂಲಕವೇ ಹಾಜರಾತಿ ಹಾಕುವುದು ಕಡ್ಡಾಯ. ಕಸ ವಿಲೇವಾರಿ ಸಿಬ್ಬಂದಿಗೆ ಕಾರ್ಯನಿರ್ವಹಣೆ ಆಧಾರದಲ್ಲಿ  ಸಮಯಕ್ಕೆ ಸರಿಯಾಗಿ ಪಾವತಿ ಮಾಡಬೇಕು ಮತ್ತು ಒಮ್ಮೆ ಮಾತ್ರ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಳಕೆ ಮೇಲಿನ ನಿಷೇಧವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ವಾಣಿಜ್ಯ ಮಳಿಗೆಗಳೂ ಇಂಥಹವುಗಳನ್ನು ಬಳಸುತ್ತಿದ್ದರೆ ಅಥವಾ ಮಾರಾಟ ಮಾಡುತ್ತಿದ್ದರೆ ಪತ್ತೆ ಹಚ್ಚಿ ದಂಡಿ ವಿಧಿಸುವಂತೆಯೂ ಆಯುಕ್ತರು  ಸೂಚಿಸಿದ್ದಾರೆ.

ಇದೇ ವೇಳೆ ಹಸಿ, ಒಣ ಮತ್ತು ನೈರ್ಮಲ್ಯ ಕಸಗಳನ್ನು ಸರಿಯಾಗಿ ವಿಂಗಡಿಸುವಂತೆ ವಾರ್ಡ್‌ನ ನಿವಾಸಿಗಳಲ್ಲಿ ಜಾಗೃತಿ ಮೂಡಿಸಬೇಕು. ಈ ವಾರ್ಡ್‌ನಲ್ಲಿ ಇನ್ನೂ ಮೂರು ತಿಂಗಳುಗಳ ಒಳಗೆ ಕಸ ವಿಂಗಡಣೆಯಲ್ಲಿ ಶೇ 100ರಷ್ಟು ಸಾಧನೆ ಮಾಡಬೇಕು. ವಾರ್ಡ್‌ನಲ್ಲಿ ಎಲ್ಲೂ ಕಸದ ರಾಶಿಗಳು (ಬ್ಲಾಕ್‌ ಸ್ಪಾಟ್‌)  ಕಂಡುಬರಬರದಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com