ಕೋಲಾರ: ರಾಜ್ಯದಲ್ಲಿ ಡ್ರಗ್ಸ್ ಪ್ರಕರಣದ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಕೋಲಾರದಲ್ಲಿ ಪೊಲೀಸರು ಬರೊಬ್ಬರಿ 14 ಲಕ್ಷ ರೂ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಕುರಿತು ಖಚಿತ ಮಾಹಿತಿ ಪಡೆದ ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ಅವರ ನೇತೃತ್ವದ ಸೈಬರ್ ಅಪರಾಧ, ಆರ್ಥಿಕ ಮತ್ತು ನಾರ್ಕೋಟಿಕ್ (ಸಿಇಎನ್) ವಿಭಾಗದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಆಂಧ್ರ ಪ್ರದೇಶದ ಕಡಪದಿಂದ ಕೋಲಾರ ಶ್ರೀನಿವಾಸಪುರ ಮಾರ್ಗವಾಗಿ ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್ ಪೆಕ್ಟರ್ ಎಸ್ ಆರ್ ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ಓರ್ವನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೋಂದಿಗೆ ಮಾತನಾಡಿದ ಎಸ್ ಪಿ ಕಾರ್ತಿಕ್ ರೆಡ್ಡಿ ಅವರು, ಖಚಿತ ಮಾಹಿತಿ ಮೇರೆಗೆ ಕೋಲಾರದ ಶ್ರೀನಿವಾಸ ಪುರದ ಥಾಡಿಗೋಲ್ ಕ್ರಾಸ್ ಬಳಿ ಇನ್ನೋವಾ ಕಾರನ್ನು ಅಡ್ಡಗಟ್ಟಲಾಯಿತು. ಈ ವೇಳೆ ಶೇಖ್ ಅಬ್ದುಲ್ ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತ ಆಂಧ್ರ ಪ್ರದೇಶ ರಾಯಚೋಟಿ ಮೂಲದವನೆಂದು ತಿಳಿದುಬಂದಿದೆ. ಅಲ್ಲದೆ ಕಾರಿನಲ್ಲಿದ್ದ ಸುಮಾರು 14 ಲಕ್ಷದ ಗಾಂಜಾ ವಶಕ್ಕೆ ಪಡೆದಿದ್ದು, ಕಾರನನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ತಂಡ ರಚನೆ ಮಾಡಿದ್ದು, ಬೆಂಗಳೂರಿನಲ್ಲಿ ಒಂದು ತಂಡ ಮತ್ತು ಆಂಧ್ರ ಪ್ರದೇಶದ ರಾಯಚೋಟಿಯಲ್ಲಿ ಮತ್ತೊಂದು ತಂಡ ತನಿಖೆ ನಡೆಸುತ್ತಿದೆ. ಕೆಜಿಎಫ್, ಕೋಲಾರ, ರಾಮನಗರ, ಬೆಂಗಳೂರು, ಹಾಸನ ಮತ್ತು ಚಿಕ್ಕ ಬಳ್ಳಾಪುರ ಸೇರಿದಂತೆ ಮಧ್ಯ ಶ್ರೇಣಿಯ ಎಲ್ಲಾ ಆರು ಪ್ರದೇಶಗಳಲ್ಲಿ ಗಾಂಜಾ ಭೀತಿ ಹೆಚ್ಚಾಗಿದೆ. ಇಲ್ಲಿ ಈ ಗಾಂಜಾ ಸಮಸ್ಯೆಯನ್ನು ಬೇರು ಸಹಿತ ಕಿತ್ತೊಗೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
Advertisement