ಬೆಂಗಳೂರು ಸ್ಫೋಟ: ಪಶ್ಚಿಮ ಏಷ್ಯಾದಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರ ಶೋಯೆಬ್ 12 ವರ್ಷಗಳ ಬಳಿಕ ಬಂಧನ

ಸಿಲಿಕಾನ್ ಸಿಟಿಯನ್ನು ತಲ್ಲಣಗೊಳಿಸಿದ್ದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ತಲ್ಲಣಗೊಳಿಸಿದ್ದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಶೋಯೆಬ್ ಬಂಧಿತ ಆರೋಪಿಯಾಗಿದ್ದು, ಎಟಿಎಸ್ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 2008ರಿಂದ ಆರೋಪಿ ತಲೆಮರೆಸಿಕೊಂಡಿದ್ದ. ಆದರೆ ಪೊಲೀಸರು ಮಾತ್ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಹುಡುಕಾಟದಲ್ಲೇ ತೊಡಗಿದ್ದರು. ಹೀಗೆ ತನಿಖೆ ನಡೆಸುವಾಗ ಕೇರಳದಲ್ಲಿರುವುದು ಪತ್ತೆಯಾಗಿದ್ದು, ಹೊಂಚು ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ.

ಸಿಮಿ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶೋಯಬ್‌ ಕೇರಳದ ಕಲ್ಲಿಕೋಟೆ ಪ್ರದೇಶದ ನಿವಾಸಿಯಾಗಿದ್ದು, ಸರಣಿ ಬಾಂಬ್‌ ಸ್ಫೋಟದಲ್ಲಿ ಭಾಗಿಯಾಗಿದ್ದು, ಬಳಿಕ ತಲೆಮರೆಸಿಕೊಂಡಿದ್ದಾನೆ.ಆತನ ಬಂಧನಕ್ಕೆ ತನಿಖಾ ಸಂಸ್ಥೆಗಳು ರೆಡ್‌ಕಾರ್ನರ್‌ ನೋಟಿಸ್‌ ಸಹ ಹೊರಡಿಸಿದ್ದವು. ಉಗ್ರ ರಿಯಾಜ್‌ ಭಟ್ಕಳನ ಆಪ್ತ ವಲಯದಲ್ಲಿ ಗುರ್ತಿಸಿಕೊಂಡಿದ್ದ ಶೋಯಬ್‌, ದೇಶದಲ್ಲಿ ನಡೆದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕಗಳನ್ನು ಸರಬರಾಜು ಮಾಡುವ ಕೆಲಸದಲ್ಲಿ ತೊಡಗಿದ್ದ ಎನ್ನಲಾಗಿದೆ.

ದೆಹಲಿಯಲ್ಲಿನ ಹವಾಲಾ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ. 2008ರಲ್ಲಿ ನಡೆದ ಅಹಮದಾಬಾದ್‌ ಸರಣಿ ಸ್ಫೋಟ ಪ್ರಕರಣದಲ್ಲಿಯೂ ಪಾಲ್ಗೊಂಡಿರುವ ಶಂಕೆಯಿದೆ. ಈ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. 2008ರ ಜುಲೈ 25ರಂದು ಮಡಿವಾಳ, ಮೈಸೂರು ರಸ್ತೆ ಸೇರಿದಂತೆ ನಗರದ ಒಂಭತ್ತು ಕಡೆ ಸರಣಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಒಬ್ಬರು ಮೃತಪಟ್ಟು 20 ಮಂದಿ ಗಾಯಗೊಂಡಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಕೇರಳದ ಪೀಪಲ್‌ ಡೆಮಾಕ್ರಟಿಕ್‌ ಪಾರ್ಟಿ ಮುಖಂಡ ಅಬ್ದುಲ್‌ ನಾಜೀರ್‌ ಮದನಿ ಸೇರಿದಂತೆ ಹಲವರನ್ನು ಬಂಧಿಸಿತ್ತು.   ಶೋಯಬ್‌ ಜತೆಗೆ ಉತ್ತರಪ್ರದೇಶ ಮೂಲದ ಮತ್ತೂಬ್ಬ ಉಗ್ರನನ್ನೂ ಬಂಧಿಸಲಾಗಿದೆ. ಇವರಿಬ್ಬರೂ ಸೌದಿ ಅರೇಬಿಯಾದಿಂದ ತಿರುವನಂತಪುರಂಗೆ ಬರುತ್ತಿದ್ದರು. ಇವರು ಲಷ್ಕರ್‌ ಹಾಗೂ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಗೆ ಸೇರಿದವರು ಎಂದು ಹೇಳಲಾಗಿದೆ.

ಕಳೆದ 12 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಶೋಯೆಬ್ ಗಾಗಿ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದರು. ಈ ಪ್ರಕರಣ ಸಂಬಂಧ ಇದುವರೆಗೆ ಸುಮಾರು 32 ಆರೋಪಿಗಳನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com