ಸೆಲ್ಫೀ ಕೇಳುವವರು, ವಿಧಾನಸೌಧಕ್ಕೆ ಭೇಟಿ ನೀಡುವವರಿಂದ ನಮಗೆ ಅಪಾಯ: ಕೊರೋನಾ ಕುರಿತು ರಾಜಕೀಯ ನಾಯಕರ ಆತಂಕ
ಚುನಾಯಿತ ಜನಪ್ರತಿನಿಧಿಗಳಾಗಿರುವುದರಿಂದ ಜನರು ನಮ್ಮೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ... ವಿಧಾನಸೌಧಕ್ಕೆ ನಮ್ಮನ್ನು ಭೇಟಿ ಮಾಡಲು ಸಾಕಷ್ಟು ಜನರು ಬರುತ್ತಿರುವುದರಿಂದ ನಮ್ಮ ಜೀವ ಅಪಾಯಕ್ಕೆ ಸಿಲುಕಿದೆ ಎಂದು ಕೊರೋನಾ ಸೋಂಕು ಹರಡುವಿಕೆ ಕುರಿತು ರಾಜಕೀಯ ನಾಯಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Published: 25th September 2020 12:25 PM | Last Updated: 25th September 2020 02:06 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಚುನಾಯಿತ ಜನಪ್ರತಿನಿಧಿಗಳಾಗಿರುವುದರಿಂದ ಜನರು ನಮ್ಮೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ... ವಿಧಾನಸೌಧಕ್ಕೆ ನಮ್ಮನ್ನು ಭೇಟಿ ಮಾಡಲು ಸಾಕಷ್ಟು ಜನರು ಬರುತ್ತಿರುವುದರಿಂದ ನಮ್ಮ ಜೀವ ಅಪಾಯಕ್ಕೆ ಸಿಲುಕಿದೆ ಎಂದು ಕೊರೋನಾ ಸೋಂಕು ಹರಡುವಿಕೆ ಕುರಿತು ರಾಜಕೀಯ ನಾಯಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾನಸಭೆಯಲ್ಲಿ ನಿನ್ನೆ ಸಂತಾಪ ನಿರ್ಣಯ ಮಂಡಿಸಿದ ಸದಸ್ಯರು, ಗೌರವ ಸಲ್ಲಿಸಿದರು. ಎಲ್ಲಾ ಸದಸ್ಯರು ಒಂದು ನಿಮಿಷ ಮೌನಾಚರಿಸಿ ಗೌರವ ಸಲ್ಲಿಸಿದರು.
ನಿರ್ಣಯ ಬೆಂಬಲಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸುರೇಶ್ ಅಂಗಡಿಯವರ ಸಾವಿನಿಂದ ನಾವು ಸೇರಿದಂತೆ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದೆ. ಏಮ್ಸ್ ನಂತಹ ಆಸ್ಪತ್ರೆಯಲ್ಲಿ ಇದ್ದವರಿಗೆ ಹೀಗಾದರೆ ನಮ್ಮ ಗತಿ ಏನು ಎಂಬ ಆತಂಕ ಜನಸಾಮಾನ್ಯರಲ್ಲಿ ಮೂಡಿದೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸುರೇಶ್ ಅಂಗಡಿ, ಸಜ್ಜನ ಮತ್ತು ಸ್ನೇಹ ಜೀವಿಯಾಗಿದ್ದರು. ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶ ಹೊಂದಿದ್ದರು. ಇವರು ಕೊರೊನಾಗೆ ಬಲಿಯಾಗುತ್ತಾರೆ ಎಂದು ಯಾರು ಕೂಡ ಭಾವಿಸಿರಲಿಲ್ಲ. ಪ್ರಖ್ಯಾತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆತಿದ್ದರೂ ಅವರು ನಿಧನರಾಗಿದ್ದಾರೆ. ಇದರಿಂದ ರಾಜಕಾರಣಿಗಳಿಗೆ ಹೆಚ್ಚಿನ ಆತಂಕ ಶುರುವಾಗಿದೆ. ದೇಶದ ಅತ್ಯುನ್ನತ ಆಸ್ಪತ್ರೆಯಲ್ಲೇ ಚಿಕಿತ್ಸೆ ದೊರೆತವರು ಕೂಡ ಬದುಕುತ್ತಿಲ್ಲ. ಅಂತಹವರಲ್ಲಿ ನಮ್ಮ ಪಾಡೇನು ಎಂಬ ಆತಂಕ ಕಾಡುತ್ತಿದೆ. ಜನಪ್ರತಿನಿಧಿಗಳಿಗೆ ಕೊರೋನಾದಿಂದ ಸಾಕಷ್ಟು ಅಪಾಯ ಎದುರಾಗುತ್ತಿದೆ. ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ನಮ್ಮ ಬಳಿ ಬರುವ ಸಾಕಷ್ಟು ಜನರು ಮಾಸ್ಕ್'ಗಳನ್ನು ತೆಗೆದುಹಾಕುತ್ತಾರೆ. ಇದು ನಿಜಕ್ಕೂ ಆತಂತಕಕಾರಿ ಬೆಳವಣಿಗೆಯಾಗಿದೆ. ನಾವು ಜನಪ್ರತಿನಿಧಿಗಳಾಗಿದ್ದು, ಜನರ ಜೀವನದಲ್ಲಿರುವವರು. ಹೀಗಾಗಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಅಂಗಡಿಯವರು ಅನೇಕ ಯೋಜನೆಗಳಿಗೆ ಜೀವ ತುಂಬಿದ್ದರು. ಬಾದಾಮಿ ಹತ್ತಿರ ರೈಲ್ವೆ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ತಾವು ಕೂಡ ಅವರಿಗೆ ಮನವಿ ಮಾಡಿದ್ದೆ, ಅದನ್ನೂ ಮಾಡಿಕೊಡುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಅದಕ್ಕೂ ಮೊದಲು ಕಾಲಾಧೀನರಾಗಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಿದರು.
ಬಸವನಗೌಡ ಪಾಟೀಲ್ ಯತ್ನಾಳ್, ಸುರೇಶ್ ಅಂಗಡಿ ನಿಧನದಿಂದ ಆಘಾತಗೊಂಡಿದ್ದೇನೆ. ಏಮ್ಸ್ ನಂತಹ ದೊಡ್ಡ ಸಂಸ್ಥೆಯಲ್ಲಿಯೇ ಅವರ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ನಾವು ಕೋವಿಡ್ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ವಾರಕ್ಕೆ ಎರಡು ಬಾರಿ ಲಾಕ್ ಡೌನ್ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ತಮಗೆ ಕೊರೊನಾ ಬಂದಾಗ ಖಾಸಗಿ ಆಸ್ಪತ್ರೆಯೊಂದು 3.80 ಲಕ್ಷ ಮೂರು ದಿನಕ್ಕೆ ಬಿಲ್ ಮಾಡಿದೆ. ಶಾಸಕರಾದ ನಮಗೇ ಇಷ್ಟು ಬಿಲ್ ಮಾಡಿದ್ದರೆ ಜನಸಾಮಾನ್ಯರ ಪಾಡೇನು? ಬೇಕಾಬಿಟ್ಟಿಯಾಗಿ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡುತ್ತಿವೆ. ಸರ್ಕಾರ ಏನು ಮಾಡುತ್ತಿದೆ? ಇಂತಹ ಆಸ್ಪತ್ರೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವಿದೆ ? ಎಂದು ಪ್ರಶ್ನಿಸಿದರು.