ಬೆಂಗಳೂರು: ಸಾರ್ವಜನಿಕರ ಕೋಟ್ಯಾಂತರ ರುಪಾಯಿ ವಂಚಿಸಿರುವ ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್'ನ ರೂ.255.17 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಡಯ್ಯ ಮತ್ತವರ ಕುಟುಂಬಸ್ಥರಿಗೆ ಸೇರಿದ ಕೃಷಿ, ಕೃಷಿಯೇತರ ಭೂಮಿ, ಕಟ್ಟಡಗಳು, ರೆಸಾರ್ಟ್'ಗಳು, ಬ್ಯಾಂಕ್ ಖಾತೆಯಲ್ಲಿದ್ದ ಹಣ, ಸಂಸ್ಥೆಯ ಇತರ ನಿರ್ದೇಶಕರ ಹೆಸರಲ್ಲಿರುವ ಆಸ್ತಿ ಸೇರಿ ರೂ.255.17 ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಜಪ್ತಿ ಮಾಡಲಾಗಿದೆ.
ನಂಜುಂಡಯ್ಯ ಕುಟುಂಬಸ್ಥರ ಹೆಸರಿಲ್ಲಿಯೇ 160 ಚರ ಮತ್ತು ಸ್ಥಿರಾಸ್ತಿ ಇದ್ದು, ಇದನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ರಿಟರ್ನ್ ನೀಡುವಷ್ಟು ವಹಿವಾಟು ಅಥವಾ ಹಣದ ಹರಿವು ಇಲ್ಲದೇ ಇದ್ದರೂ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ಕೊಡುವುದಾಗಿ ಹೇಳಿ ರೂ.650 ಕೋಟಿಯನ್ನು ಕಣ್ವ ಸಂಗ್ರಹಿಸಿದೆ. ಆದರೆ, ಮೆಚ್ಯುರಿಟಿ ಬಳಿಕ ಠೇವಣಿ ಹಣ, ಬಡ್ಡಿ ಮರಳಿಸಿಲ್ಲ. ಸಾರ್ವಜನಿಕರು ಹೂಡಿಕೆ ಮಾಡಿದ ಹಣವನ್ನು ಸಾಲದ ರೂಪದಲ್ಲಿ ಬೇರೆಯವರಿಗೆ ವರ್ಗಾಯಿಸಿದ್ದಾರೆ.
ಮರುಪಾವತಿಗಳು ಮತ್ತು ಲಭ್ಯವಿರುವ ಸಂಪನ್ಮೂಲ ಸಾಮರ್ಥ್ಯ ಮೀರಿ ವಹಿವಾಟು ನಡೆಸಲಾಗಿದೆ. ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ವಹಿವಾಟು ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಇಡಿ ತಿಳಿಸಿದೆ.
Advertisement