ಬೆಂಗಳೂರು: ನಗರದ ವಿವಿಧೆಡೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಚಡ್ಡ ಕೃಷ್ಣನ್ (22) ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮೂರ್ತಿ (40) ಬಂಧಿತ ಆರೋಪಿಗಳು. ಹೊರ ರಾಜ್ಯದಿಂದ ಗಾಂಜಾ ತರಿಸಿಕೊಂಡು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು.
'ಕೋರಮಂಗಲದ ಬಳ್ಳಾರಿ ಕಾಲೊನಿ ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡಲು ಬಂದಿದ್ದರು. ಈ ಮಾಹಿತಿ ಆಧರಿಸಿ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಲಾಯಿತು' ಎಂದು ಪೊಲೀಸರು ತಿಳಿಸಿದರು.
'ಆರೋಪಿಗಳಿಂದ 84.60 ಲಕ್ಷ ಮೌಲ್ಯದ 141 ಕೆ.ಜಿ ಗಾಂಜಾ, ತೂಕದ ಯಂತ್ರ, ಒಂದು ವಾಹನ, 4 ಸಾವಿರ ನಗದು, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.
'ಆರೋಪಿಗಳು ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಅರಕು ಗುಡ್ಡಗಾಡು ಪ್ರದೇಶದ ಆದಿವಾಸಿಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದರು. ಅದನ್ನು ರಾಜ್ಯಕ್ಕೆ ತಂದು ಕೋರಮಂಗಲ, ಎಚ್.ಎಸ್.ಆರ್.ಬಡಾವಣೆ, ಕೆ.ಆರ್.ಪುರ, ಕೆ.ಆರ್.ಪೇಟೆ ಸೇರಿದಂತೆ ಹಲವೆಡೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎಂದೂ ಹೇಳಿದ್ದಾರೆ.
Advertisement