ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಆಮ್ಲಜನಕ ಕೊರತೆ ಸರಿದೂಗಿಸಲು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಬುಧವಾರ ಉಕ್ಕು ತಯಾರಿಕಾ ಕಾರ್ಖಾನೆಗಳ ಜೊತೆ ಸಭೆ ನಡೆಸಿದ್ದಾರೆ.
ಜೆಎಸ್ ಡಬ್ಲ್ಯೂ ಮಂಗಳವಾರ ಪ್ರತಿದಿನ 400 ಟನ್ ಆಕ್ಸಿಜನ್ ಪೂರೈಕೆ ಮಾಡುವುದಾಗಿ ತಿಳಿಸಿದ ನಂತರ, ಬಲ್ದೋಟಾ, ಜಿಂದಾಲ್ ಸೇರಿದಂತೆ ಹಲವು ಉಕ್ಕಿನ ಕಾರ್ಖಾನೆಗಳು ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಮಾಡುವುದಾಗಿ ತಿಳಿಸಿವೆ.
ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ, ಆಕ್ಸಿಜನ್ ಪೂರೈಕೆಗೆ ಕಾರ್ಖಾನೆಗಳು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಉಕ್ಕಿನ ಕೈಗಾರಿಕೆಗಳು ದ್ರವೀಕೃತ ಆಮ್ಲಜನಕವನ್ನು ತಮ್ಮ ಘಟಕಗಳಲ್ಲಿ ಬಳಸಿಕೊಂಡು ತಯಾರಿಸುತ್ತವೆ.ಈ ಸರಬರಾಜುಗಳನ್ನು ಆದ್ಯತೆಯ ಆಧಾರದ ಮೇಲೆ ಆಸ್ಪತ್ರೆಗಳಿಗೆ ನೀಡಲು ಸೂಚನೆ ನೀಡಲಾಗಿದೆ.
ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಸ್ಪತ್ರೆಗಳಿಗೆ ಪೂರೈಸಲು ಅವರು ಒಪ್ಪಿದ್ದಾರೆ. ಇದು ಆಮ್ಲಜನಕದ ಅಗತ್ಯವಿರುವ ಮತ್ತು ಐಸಿಯುಗಳಲ್ಲಿರುವ ಅನೇಕ ರೋಗಿಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಅಗತ್ಯವಿರುವ ಆಮ್ಲಜನಕದ ಪ್ರಮಾಣವನ್ನು ಪತ್ತೆ ಹಚ್ಚಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ನಿರಾಣಿ ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧದ ಈ ಹೋರಾಟದಲ್ಲಿ ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
Advertisement