ಬೆಂಗಳೂರು: ಮಾರಕ ಕೊರೋನಾ ವೈರಸ್ 2ನೇ ಅಲೆಯಿಂದಾಗಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕರ್ಫೂ ಹೇರಲಾಗಿದ್ದು, ಪರಿಣಾಮ ದಿನಸಿ ಟ್ರಕ್ ಗಳು ಬೆಂಗಳೂರಿಗೆ ತಲುಪುತ್ತಿಲ್ಲ.
ಹೌದು... ದಕ್ಷಿಣ ಭಾರತದ ಅತಿದೊಡ್ಡ ಕೃಷಿ ಮಾರುಕಟ್ಟೆಯಾದ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿನಸಿ ವಸ್ತುಗಳ ಟ್ರಕ್ ಗಳು ಆಗಮಿಸಲು ಹಿಂದೇಟು ಹಾಕುತ್ತಿವೆ. ಏತನ್ಮಧ್ಯೆ, ಮಾರುಕಟ್ಟೆಯಲ್ಲಿ ಜನಸಮೂಹ ನಿಯಂತ್ರಿಸಲು ಸರ್ಕಾರ ನಿರ್ಬಂಧಗಳನ್ನು ಹೇರಿದೆ. ಅದರಂತೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲೂಗೆಡ್ಡೆ ಮಾರುಕಟ್ಟೆಯನ್ನು ಈ ವಾರಾಂತ್ಯದಲ್ಲಿ ನೆಲಮಂಗಲದ ದಾಸನಪುರಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಇದು ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಅಕ್ಕಿ, ಆಟ್ಟಾ, ಸಕ್ಕರೆ, ದ್ವಿದಳ ಧಾನ್ಯಗಳು, ಮೆಣಸಿನಕಾಯಿ, ಬೆಲ್ಲ ಮತ್ತು ತೆಂಗಿನಕಾಯಿ ನಿರ್ವಹಣೆ ಮಾಡುವ ಒಟ್ಟು 1,980 ಸಗಟು ಅಂಗಡಿಗಳಲ್ಲಿ ಸುಮಾರು 2,000 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಸಗಟು ಆಹಾರ ಧಾನ್ಯಗಳ ಸಂಘಟನೆಯ ಅಧ್ಯಕ್ಷ ರಮೇಶ್ ಚಂದ್ರ ಲಾಹೋತಿ ಅವರು, ಪ್ರತೀ 10 ಆರ್ಡರ್ ನಲ್ಲಿ ಕೇವಲ 5 ಟ್ರಕ್ ಗಳು ಮಾತ್ರ ಬೆಂಗಳೂರಿಗೆ ಬರಲು ಒಪ್ಪಿಗೆ ನೀಡುತ್ತಿವೆ. ಚಾಲಕರಲ್ಲೂ ಕೂಡ ಕೋವಿಡ್ ಸೋಂಕಿನ ಬಗ್ಗೆ ಹೆಚ್ಚಿನ ಅರಿವಿದೆ. ಹೀಗಾಗಿ ನಗರಕ್ಕೆ ಬರಲು ಭಯಪಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈರುಳ್ಳಿ ಆಲೂಗಡ್ಡೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಉದಯ್ ಶಂಕರ್ ಅವರು ಮಾತನಾಡಿ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ನಿರ್ವಹಿಸುವ 300 ಕ್ಕೂ ಹೆಚ್ಚು ಅಂಗಡಿಗಳು ತುಮಕುರು ರಸ್ತೆಯ ದಾಸನಾಪುರಕ್ಕೆ ಸ್ಥಳಾಂತರಗೊಂಡಿವೆ. ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಸೂಚಿಸಿದ ತಾತ್ಕಾಲಿಕ ವ್ಯವಸ್ಥೆಯಾಗಿದೆ. ನಮ್ಮ ಉತ್ಪನ್ನಗಳು ಬೇಗ ಹಾಳಾಗುವ ಸರಕುಗಳಾಗಿರುವುದರಿಂದ, ನಿಯಮಿತವಾಗಿ ದೈನಂದಿನ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷ ಗರಿಷ್ಠ ಇದೇ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಇದನ್ನೇ ಮಾಡಿದ್ದೇವೆ. ಈ ವರ್ಷವೂ ಮಾರುಕಟ್ಟೆಯನ್ನು ದಾಸನಾಪುರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದರು.
ಆದರೆ ಮಾರುಕಟ್ಟೆ ಸ್ಥಳಾಂತರದ ನಂತರ ವ್ಯವಹಾರವು ಕುಸಿದಿದೆ. ಅಲ್ಲದೆ ವ್ಯಾಪಾರಿಗಳಿಗೆ ಇದು ಅನುಕೂಲಕರವಾಗಿಲ್ಲ, ಅವರು ಯಶವಂತಪುರಕ್ಕೆ ಹಿಂತಿರುಗುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಚಿತ್ರದುರ್ಗ ಮತ್ತು ಚಳ್ಳಕೆರೆಯ ಈರುಳ್ಳಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಬೆಳ್ಳುಳ್ಳಿ ಮತ್ತು ಆಲೂಗಡ್ಡೆಗಳನ್ನು ಇಲ್ಲಿ ತರಲಾಗುತ್ತದೆ. ಒಟ್ಟು 55,185 ಚೀಲ ಈರುಳ್ಳಿ ದಾಸನಪುರ ಮಾರುಕಟ್ಟೆಗೆ ಬಂದಿದೆ. ಸಾಮಾನ್ಯ ಪ್ರಮಾಣಕ್ಕಿಂತ ಶೇ.50ರಷ್ಟು ಹೆಚ್ಚು ಎಂದು ಅವರು ಹೇಳಿದರು.
Advertisement