ವಿಜಯಪುರ: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಜಾರಿ ಮಾಡಿದ್ದ ನಿಯಮ ಉಲ್ಲಂಘಿಸಿ ಜಾತ್ರೆ ಮಾಡಲಾಗಿದ್ದು, ತೇರು ಎಳೆಯುವಾಗ ತೇರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿಓರ್ವ ಮೃತಪಟ್ಟಿದ್ದಾರೆ.
ಮೃತರನ್ನು ಕರಿಯಪ್ಪ ಕಿಲ್ಲೇದ (45)ಎಂದು ಗುರುತಿಸಲಾಗಿದೆ.
ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡದಲ್ಲಿ ನಿಷೇಧದ ನಡುವೆಯೂ ಬುಧವಾರ ಕಣ್ಣುತಪ್ಪಿಸಿ ಶ್ರೀ ಪವಾಡ ಬಸವೇಶ್ವರ ಜಾತ್ರೆ ಜರುಗಿದೆ. ಈ ವೇಳೆ ತೇರನ್ನು ಎಳೆಯುವಾಗ ತೇರಿನ ಚಕ್ರದ ಕೆಳಗೆ ಸಿಲುಕಿ ಕರಿಯಪ್ಪ ಮೃತಪಟ್ಟಿದ್ದಾರೆ.
ಸರ್ಕಾರದ ನಿಯಮದಂತೆ ದೇವಸ್ಥಾನ ಕಮಿಟಿಯವರು ಜಾತ್ರೆ ರದ್ದುಗೊಳಿಸಲಾಗಿದ್ದು, ಸಾರ್ವಜನಿಕರು ಯಾರು ಜಾತ್ರೆಗೆ ಬರವಂತಿಲ್ಲ ಎಂದು ಪ್ರಕಟಣೆ ಹೊರಡಿಸಿದ್ದರು. ಆದರೂ, ಇಂದು ಮಧ್ಯಾಹ್ನ ಪೊಲೀಸರ ಕಣ್ಣುತಪ್ಪಿಸಿ ತೇರು ಎಳೆಯುವಾಗ ಈ ದುರ್ಘಟನೆ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರುಣ ಕೋಳೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ನಡೆಸಿದ ದೇವಸ್ಥಾನ ಕಮಿಟಿ ವಿರುದ್ಧ ಮುದ್ದೇಬಿಹಾಳ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
Advertisement