ಕೊರೋನಾ: ಬಿಬಿಎಂಪಿ ಸಿದ್ಧತೆಗೆ ಅಸಮಾಧಾನ, ಸೌಲಭ್ಯ ಕಲ್ಪಿಸಲು 2 ದಿನ ಕಾಲಾವಕಾಶ ನೀಡಿದ ಸಚಿವ ಸೋಮಣ್ಣ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಪರಿಸ್ಥಿತಿ ನಿರ್ವಹಿಸಲು ಬಿಬಿಎಂಪಿ ನಡೆಸಿರುವ ಸಿದ್ಧತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಸತಿ ಸಚಿವ ವಿ.ಸೋಮಣ್ಣ ಅವರು, ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಎರಡು ದಿನ ಕಾಲಾವಕಾಶ ನೀಡಿದ್ದಾರೆ.
ಕೊರೋನಾ ಪರಿಸ್ಥಿತಿ ನಿರ್ವಹಿಸಲು ಬಿಬಿಎಂಪಿ ನಡೆಸಿರುವ ಸಿದ್ಧತೆ ಕುರಿತು ನಿನ್ನೆಯಷ್ಟೇ ಸಚಿವ ಸೋಮಣ್ಣ ಅವರು ನಗರದಲ್ಲಿ ಪರಿಶೀಲನೆಗಿಳಿದಿದ್ದರು. ಈ ವೇಳೆ ಸಿದ್ಧತೆ ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಮೊದಲ ಅಲೆ ವೇಳೆ ಪ್ರತಿ ಗಲ್ಲಿ, ಮನೆಯ ಸೋಂಕಿತರನ್ನು ಪತ್ತೆ ಹಚ್ಚಿ ಅವರ ಪ್ರಾಥಮಿಕ ಸಂಪರ್ಕಿತರು ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ನಿರ್ಧಿಷ್ಟದಿನಗಳ ಕಾಲ ಕ್ವಾರಂಟೈನ್ನಲ್ಲಿರುವಂತೆ ಹಾಗೂ ಅವರಿಗೂ ಕೋವಿಡ್ ಪರೀಕ್ಷೆ ನಡೆಸುವ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ, ಈಗ ಈ ನಿಯಮಗಳೆಲ್ಲವೂ ಕೇವಲ ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣ ಮಾರ್ಗಸೂಚಿಗೆ ಸೀಮಿತವಾಗಿವೆ. ಬಿಬಿಎಂಪಿ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಇದರಿಂದ ನಗರದ ಗಲ್ಲಿ ಗಲ್ಲಿ, ಮನೆ ಮನೆಗೂ ಕೋವಿಡ್ ವ್ಯಾಪಿಸುತ್ತಿದೆ ಎಂದು ಬೆಂಗಳೂರು ನಗರ ನಾಗರಿಕರ ವೇದಿಕೆ ಸದಸ್ಯ ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 16 ರಂದು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಈ ವೇಳೆ ಯಾವೆಲ್ಲಾ ಸಿದ್ಧತೆಗಳನ್ನು ಮಾಡಬೇಕೆಂಬ ಸೂಚನೆಗಳನ್ನು ನೀಡಲಾಗಿತ್ತು. ಆಧರೂ, ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಪಶುವೈದ್ಯಕೀಯ ಕಾಲೇಜಿನಲ್ಲಿರುವ ಕೋವಿಡ್ ಕೇರ್ ಸೆಂಟರ್ ಮತ್ತು ಹೆಬ್ಬಾಳಾದ ವಾರ್ ರೂಂ, ಕೆ.ಜಿ.ಹಳ್ಳಿಯ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಸರ್ವಜ್ಞನಗರದಲ್ಲಿನ ವಾರ್ ರೂಂ, ಶಾಂತಿ ನಗರದ ವಾರ್ ರೂಂ, ಶಾಂತಿನಗರದ ವಾರ್ ರೂಂ ಮತ್ತು ಇತರೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ಸಚಿವ ಸೋಮಣ್ಣ ಅವರು ಸೌಲಭ್ಯಗಳ ಕುರಿತು ಪರಿಶೀನೆ ನಡೆಸಿದರು.
ಈ ವೇಳೆ ಶುಕ್ರವಾರದೊಳಗಾಗಿ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ 150 ಹಾಸಿಗೆಯುಳ್ಳ ಕೋವಿಡ್ ಕೇರ್ ಕೇಂದ್ರ ಮತ್ತು ಪ್ರೈಮ್ ರೋಸ್ ರಸ್ತೆಯಲ್ಲಿ ಬುಧವಾರದೊಳಗಾಗಿ 100 ಹಾಸಿಗೆಯುಳ್ಳ ಕೋವಿಡ್ ಕೇರ್ ಕೇಂದ್ರವನ್ನು ಸಿದ್ಧಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಇನ್ನು ಮುಂದೆ ಮೃದುತ್ವವನ್ನು ತೋರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.