ಕೋಮು ಸೌಹಾರ್ದತೆ: ಅನಾಥೆಯನ್ನು ಮಗಳಂತೆ ಪೋಷಿಸಿ ಹಿಂದೂ ಪದ್ಧತಿಯಂತೆ ಮದುವೆ ಮಾಡಿಕೊಟ್ಟ ಮುಸ್ಲಿಂ ವ್ಯಕ್ತಿ!

ಕುಟುಂಬಸ್ಥರೆಲ್ಲರನ್ನೂ ಕಳೆದುಕೊಂಡು ಅನಾಥಳಾಗಿದ್ದ ಹಿಂದೂ ಹುಡುಗಿಯೊಬ್ಬಳನ್ನು ಮಗಳಂತೆಯೇ ಸಾಕಿದ ಮುಸ್ಲಿಂ ವ್ಯಕ್ತಿಯೊಬ್ಬರು ಇದೀಗ ಆಕೆಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಸಿಕೊಟ್ಟು ಕೋಮು ಸೌಹಾರ್ದ ಮೆರೆದ ಘಟನೆ ವಿಜಯಪುರದಲ್ಲಿ ನಡೆದಿದೆ. 
ಶಂಕರ್ ಹಾಗೂ ಪೂಜಾ ಅವರ ವಿವಾಹ ಕಾರ್ಯಕ್ರಮ
ಶಂಕರ್ ಹಾಗೂ ಪೂಜಾ ಅವರ ವಿವಾಹ ಕಾರ್ಯಕ್ರಮ

ವಿಜಯಪುರ: ಕುಟುಂಬಸ್ಥರೆಲ್ಲರನ್ನೂ ಕಳೆದುಕೊಂಡು ಅನಾಥಳಾಗಿದ್ದ ಹಿಂದೂ ಹುಡುಗಿಯೊಬ್ಬಳನ್ನು ಮಗಳಂತೆಯೇ ಸಾಕಿದ ಮುಸ್ಲಿಂ ವ್ಯಕ್ತಿಯೊಬ್ಬರು ಇದೀಗ ಆಕೆಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಸಿಕೊಟ್ಟು ಕೋಮು ಸೌಹಾರ್ದ ಮೆರೆದ ಘಟನೆ ವಿಜಯಪುರದಲ್ಲಿ ನಡೆದಿದೆ. 

ಕಳೆದ 13 ವರ್ಷಗಳ ಹಿಂದೆ ಬಾಲಕಿಯ ತಂದೆ ತಾಯಿ ಮೃತಪಟ್ಟಿದ್ದರು. ಬಳಿಕ ಆಕೆ ಅಜ್ಜಿಯೊಂದಿಗೆ ವಾಸವಿದ್ದಳು. ಆದರೆ, ಕೆಲಕಾಲದ ನಂತರ ಅಜ್ಜಿಯೂ ತೀರಿಕೊಂಡಿದ್ದರಿಂದ ದಿಕ್ಕಿಲ್ಲದೇ ಬಾಲಕಿ ಅನಾಥಳಾಗಿದ್ದಳು. 

ಈ ಸಂದರ್ಭದಲ್ಲಿ ಪತ್ನಿ ಹಾಗೂ ನಾಲ್ವರು ಮಕ್ಕಳ ಜತೆಗೆ ಆ ಬಾಲಕಿಗೂ ಆಶ್ರಯ ನೀಡಿದ ಮೆಹಬೂಬ್ ಮಸಳಿ ಎಂಬುವವರು ಬಾಲಕಿಗೆ ಅನಾಥ ಭಾವ ಕಾಡದಂತೆ ನೋಡಿಕೊಂಡು ಸ್ವಂತ ಮಗಳಂತೆಯೇ ಪೋಷಿಸಿದ್ದಾರೆ. ಇದೀಗ ಆಕೆ ಮದುವೆ ವಯಸ್ಸಿಗೆ ಬರುತ್ತಿದ್ದಂತೆಯೇ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಕೊಟ್ಟಿದ್ದಾರೆ.

ಜು.30ರಂದು ಮೆಹಬೂಬ್ ಮಸಳಿ ತನ್ನ ಸಾಕು ಮಗಳಿಗೆ ಹಿಂದೂ ಸಂಪ್ರದಾಯದಂತೆ ವಿವಾಹ ಮಾಡಿದ್ದು, ವಿಜಯಪುರ ಜಿಲ್ಲೆ ಆಲಮೇಲ‌ ಪಟ್ಟಣ ಈ ಘಟನೆಗೆ ಸಾಕ್ಷಿಯಾಗಿದೆ. 

ಪೂಜಾ ಒಡಗೇರಿ (18 ವರ್ಷ) ಎಂಬಾಕೆಗೆ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿಸಿದ ಮೆಹಬೂಬ್ ಮಸಳಿ, ಹಿಂದೂ ಯುವಕನೊಂದಿಗೆ ವಿವಾಹ ಮಾಡಿಕೊಟ್ಟಿದ್ದಾರೆ.

ಬಸವನಬಾಗೇವಾಡಿ ತಾಲೂಕಿನ ಸಾರವಾಡ ಗ್ರಾಮದ ಶಂಕರಪ್ಪ ಕುಂದರವಾಲೆಯೊಂದಿಗೆ ಪೂಜಾ ಒಡಗೇರಿಗೆ ವಿವಾಹ ಮಾಡಲಾಗಿದ್ದು, ಹಿಂದೂ ಬಾಲಕಿಯನ್ನು ಪೋಷಿಸಿ, ವಿವಾಹ ಮಾಡುವ ಮೂಲಕ ಮೆಹಬೂಬ್ ಭಾವೈಕ್ಯತೆ ಮೆರೆದಿದ್ದಾರೆ. 

ಆಕೆಯ ಪೋಷಕನಾಗಿರುವ ನನಗೆ ಆಕೆಯ ಸಮುದಾಯದ ಯುವಕನೊಂದಿಗೆ ವಿವಾಹ ಮಾಡಿಸುವುದೂ ನನ್ನ ಜವಾಬ್ದಾರಿಯಾಗಿದೆ. ನಮ್ಮ ಮನೆಯಲ್ಲಿಯೇ ಹಲವು ವರ್ಷಗಳಿಂದ ಬೆಳೆದಿದ್ದಳು. ನಮ್ಮ ಧರ್ಮ ಪಾಲನೆ ಮಾಡುವಂತೆ, ನಮ್ಮ ಧರ್ಮದವರನ್ನೇ ಮದುವೆಯಾಗುವಂತೆ ನಾನೆಂದಿಗೂ ಆಕೆಗೆ ಬಲವಂತ ಮಾಡಿರಲಿಲ್ಲ. ಈ ರೀತಿ ಮಾಡುವುದು ನಮ್ಮ ಧರ್ಮಕ್ಕೆ ವಿರುದ್ಧವಾದದ್ದು. ಆಕೆ ನನ್ನ ಮಗಳು. ಗ್ರಾಮದಲ್ಲಿಯೇ ಆಕೆಗೆ ಸೂಕ್ತ ಯುವಕನೊಂದಿಗೆ ವಿವಾಹ ಮಾಡಿಸಿದ್ದೇನೆ. ಯಾವುದೇ ವರದಕ್ಷಿಣೆಯನ್ನೂ ಕೇಳದೆ ಶಂಕರ್ ಹಾಗೂ ಅವರ ಪೋಷಕರು ನನ್ನ ಮಗಳನ್ನು ಸ್ವಾಗತಿಸಿದ್ದಾರೆ. ವಿವಾಹದ ಮೂಲಕ ಕೋಮು ಸೌಹಾರ್ದತೆಯ ಸಂದೇಶವನ್ನೂ ಸಮಾಜಕ್ಕೆ ರವಾನಿಸುತ್ತಿದ್ದೇನೆಂದು ಮೆಹಬೂಬ್ ಮಸಳಿಯವರು ಹೇಳಿದ್ದಾರೆ. 

ಸಮಾಜ ಸೇವೆಗೆ ಹೆಚ್ಚು ಹೆಸರುವಾಸಿಯಾಗಿರುವ ಮಸಳಿಯವರು, ಗಣೇಶ ಹಬ್ಬದ ಆಚರಣಾ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದರು. ಇದಲ್ಲದೆ, ಪಟ್ಟಣದ ಉತ್ಸವ ಸಮಿತಿಯ ಸದಸ್ಯರೂ ಆಗಿದ್ದಾರೆ. 

ಇಂತಹ ಪೋಷಕರು ಸಿಕ್ಕಿದ್ದಕ್ಕೆ ನಾನು ಅದೃಷ್ಟ ಮಾಡಿದ್ದೆ. ಹಲವು ವರ್ಷಗಳ ಕಾಲ ನನ್ನನ್ನು ಸಾಕಿದರು, ನಮ್ಮ ಸಂಪ್ರದಾಯವನ್ನೇ ಅನುಸರಿಸಲು ನನಗೆ ಅವಕಾಶ ನೀಡಿದ್ದರು. ಅವರ ಪ್ರೀತಿ ಹಾಗೂ ವಾತ್ಸವ್ಯವನ್ನು ಬಾಯಲ್ಲಿ ಹೇಳುವುದು ಅಸಾಧ್ಯ.ಮದುವೆ ನನ್ನ ಜೀವನದ ಅತ್ಯುನ್ನತ ಕ್ಷಣಗಳಲ್ಲಿ ಒಂದು ಎಂದು ಪೂಜಾ ಒಡಗೇರಿಯವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com