ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ಒಂದು ದಿನದ ಉಪವಾಸ ಕೈಗೊಂಡಿದ್ದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆಯನ್ನು ರಾಜಕಾರಣಕ್ಕಾಗಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ಪಕ್ಷವಿರಲಿ ಅದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಯಾರಾದರೂ ಅದನ್ನು ಪ್ರತಿಭಟಿಸುತ್ತಿದ್ದರೆ ಅದು ನಮಗೆ ಸಂಬಂಧಿಸಿದ್ದಲ್ಲ. ರಾಜಾರಣಕ್ಕಾಗಿಯೇ ಅದನ್ನು ವಿರೋಧಿಸಲಾಗುತ್ತಿದೆ ಎಂದರು.
ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಧರಣಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ. ಹೆಚ್ಚುವರಿ ನೀರು ಸಂಗ್ರಹಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿಗೆ ನೀರು ಪೂರೈಸುವುದಕ್ಕೆ ಸಂಗ್ರಹಿಸಲಾಗುತ್ತಿದೆ. ಅಂತರಾಜ್ಯ ನದಿ ವಿವಾದ ಈಗಾಗಲೇ ಬಗೆಹರಿದಿದ್ದು, ಟ್ರಿಬ್ಯೂನಲ್ ಕೂಡ ರಚನೆಯಾಗಿದೆ ಎಂದು ಹೇಳಿದ್ದಾರೆ.ನಾವು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಕುಡಿಯುವ ನೀರು, ಇಂಧನ ಹಾಗೂ ಬರಗಾಲದಂತಹ ಸಂಕಷ್ಟ ಸಮಯದಲ್ಲಿ ಉಪಯೋಗವಾಗುವಂತಹ ಯೋಜನೆ ಇದಾಗಿದೆ. ಈ ಯೋಜನೆಯ ಉದ್ದೇಶ ಎಲ್ಲರಿಗೂ ಗೊತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಅಣ್ಣಾಮಲೈ ಸಿಎಂ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ, ಇಡೀ ತಮಿಳುನಾಡು ಬಿಜೆಪಿ ಘಟಕ ನನ್ನ ಬೆಂಬಲಕ್ಕಿದೆ, ನಮ್ಮ ನಿಲುವು ಸ್ಪಷ್ಟವಾಗಿದೆ, ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ನಿಲುವಿನಲ್ಲಿ ನಾವು ತುಂಬಾ ಸ್ಪಷ್ಟವಾಗಿದ್ದೇವೆ. ಇದು ವಿರೋಧಾಭಾಸವಲ್ಲ. ಇದು ಸರ್ವಾಧಿಕಾರವಲ್ಲ. ಇದು ಎರಡು ಪಕ್ಷಗಳು ಮತ್ತು ಎರಡು ವಿಭಿನ್ನ ರಾಜ್ಯಗಳು , ಬಿಜೆಪಿ ತಮಿಳುನಾಡು ನಮ್ಮ ರೈತರಿಗಾಗಿ ಹೋರಾಡುತ್ತಿದ್ದೇವೆ, ಮೇಕೆದಾಟು ಕುರಿತು ಸಂಸತ್ತಿನಲ್ಲಿ ಕೇಂದ್ರ ಸಚಿವರ ಹೇಳಿಕೆ ವಿರೋಧದಿಂದ ಕೂಡಿದೆ ಎಂದು ನೀವು ಹೇಳುತ್ತೀರಾ? ಅವರು ಕಾನೂನಿನ ಪ್ರಕಾರ ಹೇಳಿಕೆ ನೀಡಿದರು. ಕರ್ನಾಟಕದ ಮುಖ್ಯಮಂತ್ರಿಯಾಗಿ, ಬೊಮ್ಮಾಯಿ ಅವರಿಗೆ ಏನು ಬೇಕೋ ಅದನ್ನು ಹೇಳುವ ಅಧಿಕಾರ ಇದೆ. ಆದರೆ ನಾನು ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಅಣ್ಣಾಮಲೈ ಹೇಳಿದರು.
ಕರ್ನಾಟಕದ ಬಿಜೆಪಿ ಸರ್ಕಾರ ಮತ್ತು ಪಕ್ಷದ ತಮಿಳುನಾಡು ಬಿಜೆಪಿ ಘಟಕದ ನಡುವಿನ ಮಾತಿನ ಸಮರ ಬಿಜೆಪಿಯನ್ನು ಸಂದಿಗ್ಧ ಸ್ಥಿತಿಯಲ್ಲಿ ಇರಿಸಿದೆ, ಒಂದು ಪಕ್ಷವಾಗಿ, ಜನರ ಕಲ್ಯಾಣ ನಮ್ಮ ಆದ್ಯತೆಯಾಗಿದೆ. ನಾವು ಎರಡೂ ರಾಜ್ಯಗಳ ಗೆಲುವನ್ನು ಬಯಸುತ್ತೇವೆ. ಇದನ್ನು ರಾಜಕೀಯ ವಿಷಯವಾಗಿ ಅಥವಾ ಭಾವನಾತ್ಮಕ ಸಮಸ್ಯೆಯಾಗಿ ನೋಡಬಾರದು. ಇದು ಪ್ರಾಯೋಗಿಕವಾಗಿರಬೇಕು. ಮೇಕೆದಾಟು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸಲು ಮಾಡಲಾಗುತ್ತಿದೆ. ತಮಿಳರು ಸೇರಿದಂತೆ ದೇಶದ ಹಲವು ಭಾಗದ ಜನರು ಬೆಂಗಳೂರಿನಲ್ಲಿ ವಾಸಿಸುತ್ತಾರೆ. ಕರ್ನಾಟಕ ಇದನ್ನು ಆಕ್ರಮಣಕಾರಿ ಮತ್ತು ಭಾವನಾತ್ಮಕ ಸಮಸ್ಯೆಯನ್ನಾಗಿ ಮಾಡಬಾರದು ಮತ್ತು ತಮಿಳುನಾಡು ಅದನ್ನು ರಾಜಕೀಯ ಮತ್ತು ಭಾವನಾತ್ಮಕ ಸಮಸ್ಯೆಯನ್ನಾಗಿ ಮಾಡಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
Advertisement