ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 625: ತುಮಕೂರಿನ ಅವಳಿ ಸೋದರಿಯರು ಮತ್ತು ಇತರ ವಿದ್ಯಾರ್ಥಿಗಳ ಯಶಸ್ಸಿನ ಗುಟ್ಟು ಇದು!
ಕೋವಿಡ್ ಎರಡನೇ ಅಲೆಯ ಭೀತಿಯ ನಡುವೆ ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿ ಫಲಿತಾಂಶವನ್ನು ಕೂಡ ಪ್ರಕಟಿಸಿದೆ. ಕೇವಲ ಒಬ್ಬ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಶೇಕಡಾ 99.9 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 157 ಮಕ್ಕಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.
Published: 10th August 2021 12:20 PM | Last Updated: 10th August 2021 01:09 PM | A+A A-

ಫಲಿತಾಂಶ ಬಂದ ನಂತರ ಪೋಷಕರೊಂದಿಗೆ ಸಂಭ್ರಮಿಸಿದ ತುಮಕೂರಿನ ಅವಳಿ ಸೋದರಿಯರು
ಬೆಂಗಳೂರು: ಕೋವಿಡ್ ಎರಡನೇ ಅಲೆಯ ಭೀತಿಯ ನಡುವೆ ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿ ಫಲಿತಾಂಶವನ್ನು ಕೂಡ ಪ್ರಕಟಿಸಿದೆ. ಕೇವಲ ಒಬ್ಬ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಶೇಕಡಾ 99.9 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 157 ಮಕ್ಕಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.
ತುಮಕೂರಿನ ಅವಳಿ ಸೋದರಿಯರಿಗೂ ನಿನ್ನೆ ವಿಶೇಷ ಸಂಭ್ರಮಾಚರಣೆಯ ದಿನ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರ್ ಕೆಂಕೆರೆಯ ಸರ್ಕಾರಿ ಶಾಲೆಯ ಧನುಶ್ರೀ ಡಿ ಮತ್ತು ಧನ್ಯಶ್ರೀ ಡಿ ಎಂಬ ಅವಳಿ ಸೋದರಿಯರು 625ಕ್ಕೆ 625 ಅಂಕಗಳನ್ನು ಗಳಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.
ಇಡೀ ವರ್ಷ ಪಠ್ಯಪುಸ್ತಕವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೇ ಇವರ ಇಂದಿನ ಸಾಧನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ವರ್ಷ ಪರೀಕ್ಷೆಯಲ್ಲಿ ಅನುಸರಿಸಲಾದ ಎಂಸಿಕ್ಯು ವಿಧಾನದ ಬಗ್ಗೆ ಅಷ್ಟು ಐಡಿಯಾ ಇರಲಿಲ್ಲ. ಕೊರೋನಾ ಮಧ್ಯೆ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದ ನಮಗೆ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಪ್ರೋತ್ಸಾಹ ನೀಡಿದ್ದರು. ಎರಡು ತಿಂಗಳ ಕಾಲ ಆನ್ ಲೈನ್ ನಲ್ಲಿ ಪಾಠ ಕೇಳಿದ್ದೆವು. ಈ ಎರಡು ತಿಂಗಳಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಶಿಕ್ಷಕರಲ್ಲಿ ಎಲ್ಲಾ ಸಂಶಯಗಳನ್ನು ಬಗೆಹರಿಸಿಕೊಂಡೆವು. ನಮ್ಮ ಹೋಂವರ್ಕ್ ಬಗ್ಗೆ ಶಿಕ್ಷಕರು ಕೂಡ ಗಮನ ನೀಡುತ್ತಿದ್ದರು. ವಿದ್ಯಾಗಮ ಕಾರ್ಯಕ್ರಮ ನಮಗೆ ಬಹಳ ಸಹಕಾರಿಯಾಯಿತು ಎಂದು ಧನುಶ್ರೀ ಹೇಳುತ್ತಾಳೆ.
ಇನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತಣಿಕಲ್ ಕಂಪೋಸಿಟ್ ಸರ್ಕಾರಿ ಹೈಸ್ಕೂಲ್ ನ ವಿದ್ಯಾರ್ಥಿ ಶ್ರೀಶ ಬಿಎಸ್ ತನಗೆ 625 ಅಂಕಗಳು ಸಿಕ್ಕಿದ ಶ್ರೇಯಸ್ಸನ್ನು ಸಂಪೂರ್ಣವಾಗಿ ಶಿಕ್ಷಕರಿಗೆ ಮತ್ತು ಪೋಷಕರಿಗೆ ನೀಡಿದ್ದಾನೆ. ಲಾಕ್ ಡೌನ್ ಕಾರಣದಿಂದ ಅಧ್ಯಯನಕ್ಕೆ ಹೆಚ್ಚು ಸಮಯ ಸಿಕ್ಕಿತು. ಚಂದನ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ವಿದ್ಯಾಗಮದ ಮೇಲೆ ಗಮನ ಹರಿಸಿದ್ದೆ. ಶಿಕ್ಷಕರ ಜೊತೆ ಹೆಚ್ಚು ಸಂಪರ್ಕ ಸಾಧ್ಯವಾಗಿರಲಿಲ್ಲ ಎಂದು ಹೇಳುತ್ತಾನೆ.
ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ವಿಡಿಯಾ ಪೂರ್ಣಪ್ರಜ್ಞ ಶಾಲೆಯ ಕಾವ್ಯ ಎಂಕೆ, ಲಾಕ್ ಡೌನ್ ಸಮಯದಲ್ಲಿ ಶಿಕ್ಷಕರ ಸಹಾಯದಿಂದ, ದಿನಂಪ್ರತಿ ಅಧ್ಯಯನ ಮಾಡುತ್ತಿದ್ದರಿಂದ, ಅಂತಿಮ ಪರೀಕ್ಷೆಗೆ ಬರಬಹುದಾದ ಪ್ರಶ್ನೆಗಳ ಮೇಲೆ ಹೆಚ್ಚಿನ ಗಮನ ಹರಿಸಿ ಓದಿದ್ದರಿಂದ ಇಷ್ಟು ಅಂಕ ಗಳಿಸಲು ಸಾಧ್ಯವಾಯಿತು ಎನ್ನುತ್ತಾಳೆ. ಉಡುಪಿ ಜಿಲ್ಲೆಯ ವಳಕಾಡು ಸರ್ಕಾರಿ ಹೈಸ್ಕೂಲ್ ನ ಜಯಂತ್ ಹೊಳ್ಳ, ತಾನು ಈ ಹಿಂದೆ ತೆಗೆದುಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳು ನನಗೆ ಸಹಾಯ ಮಾಡಿದವು, ಇದರಿಂದ 625 ಅಂಕ ಗಳಿಸಲು ಸಾಧ್ಯವಾಯಿತು ಎನ್ನುತ್ತಾನೆ.
ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 16.52ರಷ್ಟು ಮಂದಿ ವಿದ್ಯಾರ್ಥಿಗಳು ಎ+ ಗ್ರೇಡ್ ಪಡೆದಿದ್ದರೆ, ಶೇಕಡಾ 32.07 ಮಂದಿ ಎ ಗ್ರೇಡ್, ಶೇಕಡಾ 36.86 ಮಂದಿ ವಿದ್ಯಾರ್ಥಿಗಳು ಬಿ ಗ್ರೇಡ್ ಮತ್ತು ಶೇಕಡಾ 14.55ರಷ್ಟು ಮಂದಿ ವಿದ್ಯಾರ್ಥಿಗಳು ಸಿ ಗ್ರೇಡ್ ಗಳಿಸಿದ್ದಾರೆ.