ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ: ನಾಡಿನಾದ್ಯಂತ ಭಕ್ತರಿಂದ ಆಚರಣೆ, ಅಲ್ಲಲ್ಲಿ ಕೋವಿಡ್ ನಿಯಮ ಉಲ್ಲಂಘನೆ
ನಾಡಿನಾದ್ಯಂತ ಹಿಂದೂ ಭಕ್ತರು ಶುಕ್ರವಾರ ಕೋವಿಡ್-3ನೇ ಅಲೆಯ ಭೀತಿಯ ನಡುವೆ ಶ್ರಾವಣ ಮಾಸದ ಅಣ್ಣ-ತಂಗಿಯರ ಬಾಂಧವ್ಯದ ಬೆಸುಗೆ ಸಂಭ್ರಮಿಸುವ ಮೊದಲ ಹಬ್ಬ ನಾಗರ ಪಂಚಮಿಯನ್ನು ತಮ್ಮದೇ ಆಚರಣೆ ವಿಧಾನಗಳ ಮೂಲಕ ಆಚರಿಸುತ್ತಿದ್ದಾರೆ.
Published: 13th August 2021 10:23 AM | Last Updated: 13th August 2021 10:23 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು; ನಾಡಿನಾದ್ಯಂತ ಹಿಂದೂ ಭಕ್ತರು ಶುಕ್ರವಾರ ಕೋವಿಡ್-3ನೇ ಅಲೆಯ ಭೀತಿಯ ನಡುವೆ ಶ್ರಾವಣ ಮಾಸದ ಅಣ್ಣ-ತಂಗಿಯರ ಬಾಂಧವ್ಯದ ಬೆಸುಗೆ ಸಂಭ್ರಮಿಸುವ ಮೊದಲ ಹಬ್ಬ ನಾಗರ ಪಂಚಮಿಯನ್ನು ತಮ್ಮದೇ ಆಚರಣೆ ವಿಧಾನಗಳ ಮೂಲಕ ಆಚರಿಸುತ್ತಿದ್ದಾರೆ.
ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ರಾಜ್ಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಶಿವ ಮತ್ತು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಮಹಿಳೆಯರು ಹುತ್ತಕ್ಕೆ ಹಾಲೆರೆಯುವ ಸಾಂಪ್ರದಾಯಿಕ ಪದ್ಧತಿಗಳು ನಡೆದಿವೆ.
ಶಾಸ್ತ್ರ, ಸಂಪ್ರದಾಯಗಳಲ್ಲಿ ಮುಂದಿರುವ ಹಿಂದೂ ಧರ್ಮದ ಭಕ್ತರು ಬೆಳ್ಳಂಬೆಳಗ್ಗೆಯೇ ದೇವಸ್ಥಾನಗಳತ್ತ ಮುಖಮಾಡಿದ್ದಾರೆ. ನಾಗರಕಲ್ಲುಗಳಿಗೆ ಮಹಿಳೆಯರು ಹಾಲು ಎರೆದು ಸಂಭ್ರಮಿಸಿದ್ದಾರೆ. ಚಿಕ್ಕಬಳ್ಳಾಪುರದ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರು ಶ್ರದ್ಧಾಭಕ್ತಿಯಿಂದ ನಾಗರಾಜನನ್ನು ಪೂಜಿಸಿದ್ದಾರೆ.
ಆದರೆ ಈ ಸಂದರ್ಭದಲ್ಲಿ ದೇವಸ್ಥಾನದ ಪುರೊಹಿತರಿಂದಲೇ ಕೋವಿಡ್ ನಿಯಮ ಮುರಿದಿದ್ದು ಕಂಡುಬಂತು. ಮಹಿಳೆಯರು ಗುಂಪುಗೂಡಿ ಪೂಜೆ ಮಾಡಿದ್ದು ಕೋವಿಡ್ ಮಧ್ಯೆ ಭಕ್ತಾದಿಗಳ ನಿರ್ಲಕ್ಷ್ಯ ಕಾಣುತ್ತಿತ್ತು. ಮಾಸ್ಕ್ ಧರಿಸದೆ ದೈಹಿಕ ಅಂತರ ಕಾಪಾಡದೆ ಜನರು ಅಲ್ಲಲ್ಲಿ ಬೇಜವಾಬ್ದಾರಿ ತೋರಿಸುತ್ತಿದ್ದರು.
ಈ ಬಾರಿ ದೇವಾಲಯಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬ-ಹರಿದಿನಗಳ ವಿಜೃಂಭಣೆ ಆಚರಣೆಗೆ ಸರ್ಕಾರ ಕೋವಿಡ್ ಇರುವ ಕಾರಣ ಬ್ರೇಕ್ ಹಾಕಿದೆ.