ಬೆಂಗಳೂರು: ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕಮರ್ಷಿಯಲ್ ಸ್ಟ್ರೀಟ್'ನಲ್ಲಿ ಕಳಪೆ ಕಾಮಗಾರಿ ಪತ್ತೆಯಾದ ಹಿನ್ನೆಲೆಯಲ್ಲಿ ಸಚಿವ ಆರ್.ಅಶೋಕ್ ಅವರು ಮತ್ತೆ ಹೊಸ ಟೈಲ್ಸ್ ಹಾಕುವಂತೆ ಅಧಿಕಾರಿಗಳಿಗೆ ಶುಕ್ರವಾರ ಸೂಚನೆ ನೀಡಿದ್ದಾರೆ.
ಸದರಿ ರಸ್ತೆಯನ್ನು ರೂ.5.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು, ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ಜು.24ರಂದು ಉದ್ಘಾಟಿಸಿದ್ದರು. ಆದರೆ, ಮಾರನೇ ದಿನ ಸುರಿದ ಮಳೆಗೆ ರಸ್ತೆಯ ಟೈಲ್ಸ್ ಗಳು ಕಿತ್ತುಬಂದಿದ್ದವು. ಹೀಗಾಗಿ ಸ್ಥಳೀಯ ವ್ಯಾಪಾರಿಗಳ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಕಳಪೆ ಕಾಮಗಾರಿ ಬಗ್ಗೆ ದೂರುಗಳು ಕೇಳಿ ಬಂದಿದ್ದವು.
ಇದರಂತೆ ನಿನ್ನೆ ಅಶೋಕ್ ಅವರೇ ಖುದ್ದು ಕಮರ್ಷಿಯಲ್ ಸ್ಟ್ರೀಟ್'ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದರಿ ರಸ್ತೆಯಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಬಂದಿದ್ದೇನೆ. ಇತ್ತೀಚೆಗಷ್ಟೇ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದರಿ ರಸ್ತೆಯನ್ನು ಉದ್ಘಾಟಿಸಿದ್ದರು. ಇದೀಗ ಪರಿಶೀಲನೆ ವೇಳೆ ಕಳಪೆ ಕಾಮಗಾರಿಯಿಂದ ರಸ್ತೆಯ ಟೈಲ್ಸ್ ಗಳು ಕಿತ್ತಿರುವುದು ಗಮನಕ್ಕೆ ಬಂದಿದೆ. ಅಂತೆಯೇ ಟೈಲ್ಸ್ ಗಳ ಬಣ್ಣ ಹೋಗಿದೆ. ಹೀಗಾಗಿ ಗುಣಮಟ್ಟದ ಟೈಲ್ಸ್ ಅಳವಡಿಸಿ, ಸೆಪ್ಟೆಂಬರ್ ಒಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ಇದಕ್ಕೆ ಹಣ ಭರಿಸಲು ತಾಕೀತುಮಾಡಲಾಗಿದೆ ಎಂದು ತಿಳಿಸಿದರು.
ಸ್ಟ್ಯಾಂಪ್ ಡ್ಯೂಟಿ ಇಳಿಕೆ
ರೂ.45 ಲಕ್ಷ ಒಳಗಿನ ಮೊತ್ತದಲ್ಲಿ ಮನೆ ಖರೀದಿಸುವವರಿಗೆ ಇಲ್ಲಿಯವರೆಗಿದ್ದ ಶೇ.5ರಷ್ಟಿದ್ದ ಸ್ಟ್ಯಾಂಪ್ ಡ್ಯೂಟಿಯನ್ನ ಶೇ.3ಕ್ಕೆ ಇಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮನೆಕೊಳ್ಳಲು ಯೋಚಿಸುತ್ತಿರುವವರಿಗೆ ನಿಜಕ್ಕೂ ಸಂತಸದ ಸುದ್ದಿಯಾಗಿದೆ ಎಂದು ಮಾಹಿತಿ ನೀಡಿದರು.
Advertisement