ಬೆಂಗಳೂರು: ಹಾಡಹಗಲೇ ವೃದ್ಧ ದಂಪತಿಯ ಹತ್ಯೆ

ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಹಾಡಹಗಲೇ ವೃದ್ಧ ದಂಪತಿಯ ಹತ್ಯೆಯಾಗಿದ್ದು, ಸಿಲಿಕಾನ್ ಸಿಟಿ ಜನ ಬೆಚ್ಚಿಬಿದ್ದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಹಾಡಹಗಲೇ ವೃದ್ಧ ದಂಪತಿಯ ಹತ್ಯೆಯಾಗಿದ್ದು, ಸಿಲಿಕಾನ್ ಸಿಟಿ ಜನ ಬೆಚ್ಚಿಬಿದ್ದಿದ್ದಾರೆ.

ಶಾಂತರಾಜು (70), ಪ್ರೇಮಲತಾ (65) ಹತ್ಯೆ‌ಗೀಡಾದ ದಂಪತಿ.ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಕತ್ತು ಕೊಯ್ದು ದಂಪತಿಯನ್ನು ಹತ್ಯೆ ಮಾಡಿದ್ದಾರೆ.

ಹತ್ಯೆಗೀಡಾದ ಶಾಂತರಾಜು ಬಿಎಂಟಿಸಿ ನಿವೃತ್ತ ನೌಕರರಾಗಿದ್ದು, ಕಳೆದ 20 ವರ್ಷಗಳಿಂದ ಕಾಶಿನಗರದಲ್ಲಿ ವಾಸವಾಗಿದ್ದರು. ಹತ್ಯೆಯಾಗಿರುವ ದಂಪತಿಗೆ ಮಕ್ಕಳಿರಲಿಲ್ಲ. ಒಂದು ಮನೆಯಲ್ಲಿ ದಂಪತಿ ಇದ್ದು, ಇನ್ನೇರಡು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಮನೆಯಲ್ಲಿ ಮೂವರು ಚಹಾ ಕುಡಿದ ಲೋಟಗಳು ಟೇಬಲ್ ಮೇಲಿವೆ. ಚಿನ್ನಾಭರಣ ಹಾಗೂ ಹಣ ದೋಚುವ ಸಲುವಾಗಿ ಪರಿಚಯವಿದ್ದವರೇ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com