ಬೆಳಗಾವಿ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಬೆಳಗಾವಿಯ ಹಿಂಡಲಗ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಇನ್ನು ಕೆಲವೇ ಹೊತ್ತಿನಲ್ಲಿ ಬಿಡುಗಡೆಯಾಗುತ್ತಿದ್ದಾರೆ.
ಅವರು ಜೈಲಿನಿಂದ ಹೊರಗೆ ಬರುವಾಗ ಪ್ರೀತಿಯಿಂದ ಮತ್ತು ಸಂತೋಷದಿಂದ ಸ್ವಾಗತಿಸಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಅವರ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜೈಲಿನಿಂದ ಹೊರಗೆ ಜಮಾಯಿಸಿದ್ದಾರೆ.
ಈ ವೇಳೆ ನೂಕು ನುಗ್ಗಲು ಉಂಟಾಗಬಾರದು, ಅಲ್ಲದೆ ಬೆಳಗಾವಿಯಲ್ಲಿ ಕೊರೋನಾ ನಿಮಿತ್ತ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಹರಸಾಹಸಪಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಇವತ್ತು ನಮ್ಮೆಲ್ಲರಿಗೆ ಭಾವನಾತ್ಮಕ ದಿನ, ನಮ್ಮೆಲ್ಲರ ಅಣ್ಣ ವಿನಯ್ ಕುಲಕರ್ಣಿಯವರು ಇಂದು ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ, ನಾಳೆ ರಕ್ಷಾ ಬಂಧನವಿದೆ. ಹಬ್ಬದ ಸಮಯದಲ್ಲಿ ಅಣ್ಣ ಹೊರಬರುತ್ತಿರುವುದು ನಮಗೆಲ್ಲರಿಗೂ ಸಂತೋಷ ಎಂದರು.
ವಿನಯ್ ಕುಲಕರ್ಣಿಯವರು ಮಾನಸಿಕವಾಗಿ ಗಟ್ಟಿಯಾಗಿದ್ದಾರೆ, ಆದರೂ ಇನ್ನಷ್ಟು ಧೈರ್ಯ, ಉತ್ಸಾಹ, ಸಂತೋಷ ತುಂಬಲು ನಾವಿಂದು ಇಲ್ಲಿ ಸೇರಿದ್ದೇವೆ ಎಂದರು.
Advertisement