ಬೆಂಗಳೂರು: ಪತ್ನಿ ಬೆಂಗಳೂರಿನಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಬ್ ಇನ್ಸ್ಪೆಕ್ಟರ್ಗೆ ನೀಡಿದ್ದ ವರ್ಗಾವಣೆ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕಾನ್ಸ್ಟೆಬಲ್ ಆಗಿ ಬಿಎಸ್ಎಫ್ನಲ್ಲಿ ವೃತ್ತಿ ಆರಂಭಿಸಿದ್ದ ಅರ್ಜಿದಾರರು, ಜಮ್ಮು–ಕಾಶ್ಮೀರ ಸೇರಿ ದೇಶದ ಹಲವೆಡೆ 35 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪತ್ನಿ ಕ್ಯಾನ್ಸರ್ನಿಂದ ಬಳಲುತ್ತಿರುವ ಬಗ್ಗೆ ತಿಳಿಸಿದರೂ 2021ರ ಜ.9ರಂದು ಬೆಂಗಳೂರಿನಿಂದ ಕಾಶ್ಮೀರಕ್ಕೆ ವರ್ಗಾವಣೆ ಮಾಡಿ ಬಿಎಸ್ಎಫ್ ಆದೇಶ ಹೊರಡಿಸಿದೆ ಎಂದು ಆರೋಪಿಸಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವೈದ್ಯಕೀಯ ಕಾರಣ ನೀಡಿದ್ದರಿಂದಲೇ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ನಿಯಮಗಳ ಪ್ರಕಾರ ದೇಶದ ಬೇರೆ ಸ್ಥಳಕ್ಕೆ ಹೋಗಿ ಕೆಲಸ ಮಾಡಲು ಬಿಎಸ್ಎಫ್ ಸಿಬ್ಬಂದಿ ಸಿದ್ಧರಿರಬೇಕಾಗುತ್ತದೆ ಎಂದು ಬಿಎಸ್ಎಫ್ ಪರ ಹಾಜರಿದ್ದ ವಕೀಲರು ವಾದಿಸಿದರು.
2009ರಿಂದ ಕ್ಯಾನ್ಸರ್ಗೆ ತುತ್ತಾಗಿರುವ ಅರ್ಜಿದಾರರ ಪತ್ನಿ ಈಗಲೂ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೀತಿಯ ವಿಲಕ್ಷಣ ಸಂದರ್ಭದಲ್ಲಿ ಬಿಎಸ್ಎಫ್ ಸಹಾನುಭೂತಿ ತೋರಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ವಿಭಾಗೀಯ ಪೀಠ ತಿಳಿಸಿತು. ಪರಿಸ್ಥಿತಿಯ ಗಂಭೀರತೆ ಪರಿಗಣಿಸಿ ಬಿಎಸ್ಎಫ್ ಸಹಾನುಭೂತಿ ತೋರಿಸಬೇಕು ಎಂದು ಹೇಳಿದೆ.
Advertisement