ಕರ್ನಾಟಕ: ಲಸಿಕೆಯ 6 ತಿಂಗಳ ನಂತರ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಪ್ರತಿಕಾಯಗಳ ಪರೀಕ್ಷೆ
ಬೆಂಗಳೂರು: ಕೋವಿಡ್-19 ಲಸಿಕೆಯ ಎರಡೂ ಡೋಸ್ ಗಳನ್ನು ಪಡಿದಿರುವ ಆರೋಗ್ಯ ಕಾರ್ಯಕರ್ತರಿಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕೋವಿಡ್-19 ಪ್ರತಿಕಾಯಗಳ ಪರೀಕ್ಷೆ ನಡೆಸುತ್ತಿದೆ.
ಆರೋಗ್ಯ ಕಾರ್ಯಕರ್ತರು ಎರಡೂ ಡೋಸ್ ಗಳ ಲಸಿಕೆಯನ್ನು ಪಡೆದು 6 ತಿಂಗಳು ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ ಪ್ರತಿಕಾಯಗಳ ಕುಸಿತ ಉಂಟಾಗಿದೆಯೇ? ಉಂಟಾಗಿದ್ದರೆ ಮತ್ತೊಂದು ಡೋಸ್ ಲಸಿಕೆ ಅಗತ್ಯವಿದೆಯೇ ಎಂಬುದನ್ನು ಅರಿಯಲು ಈ ಪರೀಕ್ಷೆ ನಡೆಸಲಾಗುತ್ತಿದೆ.
ಫೆಬ್ರವರಿ ತಿಂಗಳ ವೇಳೆಗೆ ಈ ಆರೋಗ್ಯ ಕಾರ್ಯಕರ್ತರಿಗೆ ಎರಡೂ ಡೋಸ್ ಲಸಿಕೆಯನ್ನು ಪೂರ್ಣಗೊಳಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಪ್ರತಿಕಾಯಗಳಿಗಾಗಿ ಪರೀಕ್ಷೆ ನಡೆಸಿದ್ದಾಗ ಉತ್ತಮ ಫಲಿತಾಂಶ ಬಂದಿತ್ತು.
ಈ ಬಗ್ಗೆ ಮಾತನಾಡಿರುವ ಡಾ. ಸಿ.ಎನ್ ಮಂಜುನಾಥ್, "ಈಗ ಪರೀಕ್ಷೆಗೊಳಪಡುವ ಆರೋಗ್ಯ ಕಾರ್ಯಕರ್ತರನ್ನು ಸೆಪ್ಟೆಂಬರ್ ನಲ್ಲಿಯೂ ಪರೀಕ್ಷೆಗೊಳಪಡಿಸಲಾಗುತ್ತದೆ. ಏಪ್ರಿಲ್ ನಲ್ಲಿ ಪರೀಕ್ಷೆಗೊಳಪಡಿಸಿದಾಗ ಶೇ.80 ರಷ್ಟು ಮಂದಗೆ ಉತ್ತಮ ಪ್ರತಿಕಾಯಗಳಿತ್ತು. ಮರು ಪರೀಕ್ಷೆ ನಡೆಸುವ ವೇಳೆಗೆ ಎರಡೂ ಡೋಸ್ ಗಳನ್ನು ಪಡೆದು 6 ತಿಂಗಳು ಕಳೆದಿರುತ್ತದೆ. ಒಂದು ವೇಳೆ ಪ್ರತಿಕಾಯಗಳು ಕಡಿಮೆಯಾದಲ್ಲಿ ಆಸ್ಪತ್ರೆಗಳಲ್ಲಿರುವ ಮುನ್ನೆಲೆ ಕಾರ್ಯಕರ್ತರಿಗೆ ಹೆಚ್ಚುವರಿ ಡೋಸ್ ಗಳನ್ನು ನೀಡುವ ಬಗ್ಗೆ ಸ್ಪಷ್ಟತೆ ಸಿಗಲಿದೆ. ಪ್ರತಿಯೊಬ್ಬರಿಗೂ ಹೆಚ್ಚುವರಿ ಡೋಸ್ ನೀಡಲು ಸಾಧ್ಯವಿಲ್ಲ. ಈಗ ಲಸಿಕೆ ಪೂರೈಕೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ನಮ್ಮ ಸ್ವಂತ ಡೇಟಾವನ್ನು ಹೊಂದಿರಬೇಕೆಂದು ಡಾ. ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
ಇದೇ ವೇಳೆ ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು 12-16 ರಿಂದ 6-8 ವಾರಗಳಿಗೆ ಇಳಿಕೆ ಮಾಡಬೇಕೆಂದು, ಇಲ್ಲದೇ ಇದ್ದಲ್ಲಿ ಮೊದಲ ಡೋಸ್ ಗಳ ಲಸಿಕೆ ಪಡೆದ ನಂತರ ಸೋಂಕು ಎದುರಾದಲ್ಲಿ ಅದರ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಎರಡನೇ ಡೋಸ್ ಲಸಿಕೆಯಿಂದ ಉತ್ತಮ ಪ್ರತಿಕಾಯಗಳು ಉತ್ಪಾದನೆಯಾಗುತ್ತದೆ ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಪ್ರತಿಕಾಯಗಳ ಪರೀಕ್ಷೆ ನಡೆಸುವ ಬಗ್ಗೆ ಹಾಗೂ ಹೆಚ್ಚುವರಿ ಡೋಸ್ ನೀಡುವ ಬಗ್ಗೆ ವೈದ್ಯಕೀಯ ಸಮೂಹದಲ್ಲೇ ಭಿನ್ನಾಭಿಪ್ರಾಯಗಳಿವೆ ಎಂದು ಲಸಿಕೆ ನೀಡುವುದಕ್ಕಾಗಿ ಇರುವ ಎನ್ ಟಿಎಜಿ ಡಾ.ಜಯಪ್ರಕಾಶ್ ಮುಳಿಯಿಲ್ ಹೇಳಿದ್ದಾರೆ.