ನವದೆಹಲಿ: ತಮಿಳುನಾಡಿಗೆ 30.6 ಟಿಎಂಸಿ ನೀರು ಬಿಡುವಂತೆ ರಾಜ್ಯಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ ಎನ್ನಲಾಗಿದೆ.
ದೆಹಲಿಯಲ್ಲಿ ಇಂದು ನಡೆದ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 'ತಮಿಳುನಾಡಿಗೆ 30.6 ಟಿಎಂಸಿ ನೀರು ಹರಿಸಲು ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದರ್ ಸೂಚನೆ ನೀಡಿದ್ದಾರೆ.
ಜೂನ್, ಜುಲೈ, ಅಗಸ್ಟ್ ತಿಂಗಳುಗಳಲ್ಲಿ ಬಿಡಬೇಕಿದ್ದ ನೀರನ್ನು ಬಾಕಿ ಉಳಿಸಿಕೊಂಡು 30.6 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದರ್ ಅವರು, ಕರ್ನಾಟಕ ಆಗಸ್ಟ್ ಅಂತ್ಯಕ್ಕೆ 86 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ 57 ಟಿಎಂಸಿ ನೀರು ಬಿಡುಗಡೆ ಮಾಡಿರುವುದಾಗಿ ಕರ್ನಾಟಕ ಹೇಳಿದೆ. ಹೀಗಾಗಿ ಬಾಕಿ ನೀರನ್ನು ಬಿಡುವಂತೆ ಕರ್ನಾಟಕಕ್ಕೆ ಹೇಳಿದ್ದೇವೆ. ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಆಗ ಬಾಕಿ ಉಳಿದ ನೀರು ಹರಿಸಲು ಸಾಧ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಮೇಕೆದಾಟು ಕುರಿತು ಚರ್ಚೆಗೆ ತೀವ್ರ ವಿರೋಧ
'ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಮೇಕೆದಾಟು ಯೋಜನೆ ಬಗ್ಗೆ ಚರ್ಚೆಗೆ ಮುಂದಾದೆವು. ಸಭೆಯಲ್ಲಿ ಕೆಲ ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು. ಹೀಗಾಗಿ, ಮೇಕೆದಾಟು ಯೋಜನೆ ಚರ್ಚೆ ಮುಂದೂಡಲಾಗಿದೆ. ಮೇಕೆದಾಟು ಯೋಜನೆ ಕುರಿತು ಚರ್ಚೆಗೆ ಉಳಿದ ರಾಜ್ಯಗಳ ಅನುಮತಿಯೂ ಬೇಕು. ಅಷ್ಟೇ ಅಲ್ಲದೇ, ಗುಂಡಾರು ಯೋಜನೆಗೆ ಕರ್ನಾಟಕದಿಂದ ವಿರೋಧ ವ್ಯಕ್ತವಾಗುತ್ತಿದೆ. ಗುಂಡಾರು ಯೋಜನೆ ಚರ್ಚೆಯನ್ನು ಸಹ ಮುಂದೂಡಲಾಗಿದೆ ಎಂದು ತಿಳಿಸಿದರು.
Advertisement