ಮೈಸೂರು ಖಾಸಗಿ ಆಸ್ಪತ್ರೆ ಸರ್ವರ್ ಹ್ಯಾಕ್ ಮಾಡಿ, ಬಿಟ್ ಕಾಯಿನ್ ಗಾಗಿ ಬೇಡಿಕೆ ಇಟ್ಟ ಹ್ಯಾಕರ್ ಗಳು!

ಖಾಸಗಿ ಆಸ್ಪತ್ರೆಯೊಂದರ ಸರ್ವರ್ ಅನ್ನು ಹ್ಯಾಕ್ ಮಾಡಿದ ಹ್ಯಾಕರ್ ಗಳು ಬಿಟ್ ಕಾಯಿನ್ ಗಾಗಿ ಬೇಡಿಕೆ ಇಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಖಾಸಗಿ ಆಸ್ಪತ್ರೆಯೊಂದರ ಸರ್ವರ್ ಅನ್ನು ಹ್ಯಾಕ್ ಮಾಡಿದ ಹ್ಯಾಕರ್ ಗಳು ಬಿಟ್ ಕಾಯಿನ್ ಗಾಗಿ ಬೇಡಿಕೆ ಇಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಜಗತ್ತಿನಾದ್ಯಂತ ಆಸ್ಪತ್ರೆಗಳ ಮೇಲೆ ransomware ದಾಳಿಯ ಬೆದರಿಕೆ ಹೆಚ್ಚುತ್ತಿರುವ ಈ ಸಮಯದಲ್ಲೇ ಮೈಸೂರಿನ ಖಾಸಗಿ ಆಸ್ಪತ್ರೆಯೊಂದು ಇದಕ್ಕೆ ಇತ್ತೀಚಿನ ಬಲಿಪಶುವಾಗಿದೆ. ಸುಮಾರು 15 ದಿನಗಳ ನಂತರ ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸೈಬರ್ ಅಪರಾಧಿಗಳು ಆಸ್ಪತ್ರೆಯ ಮುಖ್ಯ ಹಣಕಾಸು ಸರ್ವರ್ ಅನ್ನು ಹ್ಯಾಕ್ ಮಾಡಿ ಹಣಕಾಸಿನ ಡೇಟಾ ಮತ್ತು ರೋಗಿಗಳ ಡೇಟಾವನ್ನು ಹ್ಯಾಕ್ ಮಾಡಿದ್ದಾರೆ. ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ಸಿಸ್ಟಮ್‌ಗೆ ಪ್ರವೇಶವನ್ನು ನಿರ್ಬಂಧಿಸಿರುವ ಸೈಬರ್ ಕ್ರಿಮಿನಲ್‌ಗಳು ಡೇಟಾವನ್ನು ಬಿಡುಗಡೆ ಮಾಡಲು ಆಸ್ಪತ್ರೆಯಿಂದ ಬಿಟ್‌ಕಾಯಿನ್ ರೂಪದಲ್ಲಿ ಸುಲಿಗೆಗೆ ಒತ್ತಾಯಿಸಿದ್ದಾರೆ.

ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, 'ನವೆಂಬರ್ 14 ರಂದು ಆಸ್ಪತ್ರೆಯ ಆಡಳಿತ ಸಿಬ್ಬಂದಿ ತಮ್ಮ ಸಿಸ್ಟಮ್‌ನಲ್ಲಿ ಪಾಪ್ ಅಪ್ ಸಂದೇಶವನ್ನು ಸ್ವೀಕರಿಸಿದಾಗ ಹ್ಯಾಕರ್ ಗಳು ಸರ್ವರ್ ಅನ್ನು ಹ್ಯಾಕ್ ಮಾಡಿದ್ದಾರೆ. ಅವರು ಆಸ್ಪತ್ರೆಯ ಮುಖ್ಯ ಹಣಕಾಸು ಸರ್ವರ್ ಅನ್ನು ಹ್ಯಾಕ್ ಮಾಡಿದ್ದು, ಅದಲ್ಲದೆ ರೋಗಿಗಳ ಡೇಟಾವನ್ನು ಹ್ಯಾಕ್ ಮಾಡಿದ್ದಾರೆ. ಬಳಿಕ ನವೆಂಬರ್ 19 ರಂದು ದಾಖಲಾದ ದೂರಿನ ಪ್ರಕಾರ, ಹ್ಯಾಕರ್‌ಗಳು ಅವರು ಕಳುಹಿಸಿದ ಇಮೇಲ್ ಐಡಿಗೆ ಬಿಟ್‌ಕಾಯಿನ್ ರೂಪದಲ್ಲಿ ರಾನ್ಸಮ್ ಅನ್ನು ವರ್ಗಾಯಿಸಿದರೆ ಮಾತ್ರ ಡೇಟಾವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ವೈದ್ಯಕೀಯ ಇತಿಹಾಸವನ್ನು ಒಳಗೊಂಡಿರುವುದರಿಂದ ಬಹಳ ಸೂಕ್ಷ್ಮ ಪ್ರಕರಣವಾಗಿದೆ: ತಜ್ಞರು
ಇದೀಗ ಈ ಸಂಬಂಧ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹ್ಯಾಕರ್‌ಗಳ ಪತ್ತೆಗೆ ಪ್ರಕ್ರಿಯೆ ಆರಂಭಿಸಿದ್ದಾರೆ. ಇದೇ ವಿಚಾರವಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿರುವ ಸೈಬರ್ ಭದ್ರತಾ ತಜ್ಞ ಡಾ.ಅನಂತ್ ಪ್ರಭು ಜಿ ಅವರು, 'ಸೈಬರ್ ಕ್ರಿಮಿನಲ್‌ಗಳು ಕಂಪ್ಯೂಟರ್ ಅಥವಾ ಆಸ್ಪತ್ರೆಗಳ ನೆಟ್‌ವರ್ಕ್‌ನ ಮೇಲೆ ransomware ಅನ್ನು ಇಮೇಲ್ ಪಾಪ್ ಗಳ ಮೂಲಕ ಆಕ್ರಮಣ ಮಾಡುತ್ತಾರೆ, ಅದು ನೈಜವಾಗಿ ಕಾಣುತ್ತದೆ. ಏಕೆಂದರೆ ಯಾವುದೇ ಸಂಸ್ಥೆ ಮತ್ತು ಫಾರ್ಮಸಿ ಗುಂಪುಗಳು ಕಾನೂನುಬದ್ಧವಾಗಿ ಇಂತಹ ಪಾಪ್ ಗಳನ್ನು ಕಳುಹಿಸುತ್ತದೆ. ಹ್ಯಾಕರ್ ಗಳು ಸಿಸ್ಟಮ್‌ಗೆ ಪ್ರವೇಶವನ್ನು ನಿರ್ಬಂಧಿಸುತ್ತಾರೆ ಅಥವಾ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತಾರೆ ಮತ್ತು ಅದನ್ನು ಡೀಕ್ರಿಪ್ಟ್ ಮಾಡಲು ಹ್ಯಾಕ್ ಗೆ ಒಳಗಾದವರಿಂದ ಹಣ ಸುಲಿಗೆ ಮಾಡುತ್ತಾರೆ. ಬ್ಯಾಂಕ್ ವಹಿವಾಟಿನ ಮೂಲಕ ಹಣವನ್ನು ಪಾವತಿಸಿದರೆ ಪೊಲೀಸರು ಈ ಅಪರಾಧಿಗಳನ್ನು ಪತ್ತೆ ಹಚ್ಚಬಹುದು ಎಂದು ಅವರು ಬಿಟ್‌ಕಾಯಿನ್ ರೂಪದಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಹಾಲಿ ಪ್ರಕರಣದಲ್ಲಿ ಆರೋಗ್ಯದ ದತ್ತಾಂಶವು ವೈದ್ಯಕೀಯ ಇತಿಹಾಸವನ್ನು ಒಳಗೊಂಡಿರುವುದರಿಂದ ಬಹಳ ಸೂಕ್ಷ್ಮವಾಗಿದೆ, ಇದು ತುಂಬಾ ಖಾಸಗಿಯಾಗಿದೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಆಸ್ಪತ್ರೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಸೈಬರ್ ಭದ್ರತೆ ಕುರಿತು ತರಬೇತಿ ನೀಡುವುದು ಬಹಳ ಮುಖ್ಯ. ಅವುಗಳನ್ನು ರಕ್ಷಿಸುವ ಆಂಟಿ-ವೈರಸ್‌ನ ನವೀಕರಿಸಿದ ಆವೃತ್ತಿಯನ್ನು ಅವರು ಹೊಂದಿರಬೇಕು. ಡೌನ್‌ಲೋಡ್ ಮಾಡುವ ಮೊದಲು ಎಲ್ಲಾ ಇಮೇಲ್ ಲಗತ್ತುಗಳನ್ನು ಸ್ಕ್ಯಾನ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು, ಅದು ಅಂತಹ ransomware ದಾಳಿಗಳನ್ನು ತಡೆಯುತ್ತದೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಹ್ಯಾಕ್ ದೃಢಪಡಿಸಿದ ಆಸ್ಪತ್ರೆ
ಏತನ್ಮಧ್ಯೆ, ಖಾಸಗಿ ಆಸ್ಪತ್ರೆಯ ಆಡಳಿತವು ತಮ್ಮ ಆಸ್ಪತ್ರೆಯಲ್ಲಿ ransomware ದಾಳಿ ವರದಿಯಾಗಿದೆ ಎಂದು TNIE ಗೆ ದೃಢಪಡಿಸಿದ್ದು, ಆದರೆ ರೋಗಿಗಳ ಡೇಟಾ ಸೋರಿಕೆಯಾಗಿದೆ ಎಂಬ ಅಂಶವನ್ನು ನಿರಾಕರಿಸಿದೆ. 'ಕೆಲ ದಿನಗಳ ಹಿಂದೆ ಆಸ್ಪತ್ರೆಯ ಕಂಪ್ಯುಟರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದು ತಾಂತ್ರಿಕ ದೋಷ ಇರಬಹುದು ಅಂದುಕೊಂಡು ಆಸ್ಪತ್ರೆಯ ಸಿಬ್ಬಂದಿ ಸುಮ್ಮನಿದ್ದರು. ಸ್ವಲ್ಪ ಹೊತ್ತಿನ ಬಳಿಕ ಹ್ಯಾಕರ್‌ಗಳು ಮೆಸೇಜ್‌ ಕಳುಹಿಸಿದ್ದಾರೆ. ನಿಮ್ಮ ಆಸ್ಪತ್ರೆಯ ದತ್ತಾಂಶಗಳನ್ನು ಹ್ಯಾಕ್‌ ಮಾಡಲಾಗಿದ್ದು, ಹಣವನ್ನು ಬಿಟ್‌ ಕಾಯಿನ್‌ ರೂಪದಲ್ಲಿ ನೀಡಿದ ನಂತರವಷ್ಟೇ ದತ್ತಾಂಶವನ್ನು ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಆದರೆ, ಈ ಎಲ್ಲ ದತ್ತಾಂಶ ಹಾರ್ಡ್‌ ಡಿಸ್ಕ್‌ನಲ್ಲೂ ಸೇವ್‌ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳಿದ್ದಾರೆ.

ಮೈಸೂರಿನಲ್ಲಿ ಮೊದಲ ಪ್ರಕರಣ
ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಆಸ್ಪತ್ರೆ ಮೇಲೆ ಸೈಬರ್‌ (ರಾನ್‌ ಸಮ್‌ ವೇರ್‌) ದಾಳಿ ಇದೇ ಮೊದಲು. ಆಸ್ಪತ್ರೆಯ ಮಾಲೀಕರು ನೀಡಿದ ದೂರಿನ ಮೇರೆಗೆ ನಗರದ ಸೈಬರ್‌, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಮಾಹಿತಿ ಪಡೆದಿರುವ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ಅಲ್ಲದೆ ಸೆಕ್ಷನ್ 65 ಮತ್ತು 43 ರ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ-2020 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತನಿಖಾ ತಂಡ ಬಹಿರಂಗಪಡಿಸಿದೆ. ಇದೇ ವಿಚಾರವಾಗಿ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, 'ಈ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಇಮೇಲ್ ಕಳುಹಿಸಿದ ಸೈಬರ್ ಅಪರಾಧಿಗಳು ನೋಂದಾಯಿಸಿದ ಡೊಮೇನ್ ಅನ್ನು ಕಂಡುಹಿಡಿದ ನಂತರ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಇಮೇಲ್ ಕಳುಹಿಸಿದ್ದೇವೆ. ನಾವು ಅವರಿಂದ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಮತ್ತು ಅದರ ಆಧಾರದ ಮೇಲೆ ತನಿಖೆ ನಡೆಯುತ್ತದೆ. ಆಸ್ಪತ್ರೆಯಲ್ಲಿ ಬ್ಯಾಕಪ್ ಇದ್ದ ಕಾರಣ ಅದನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ತನಿಖೆಗೆ ತಂಡ ರಚನೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಅವರು, ತನಿಖೆಗೆ ಇನ್ಸ್‌ಪೆಕ್ಟರ್‌ ಶೇಖರ್‌ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ದೇಶದ ಆಸ್ಪತ್ರೆಗಳ ದತ್ತಾಂಶಗಳನ್ನು ಅಳಿಸಿ ಹಾಕಲು ಸೈಬರ್‌ ಹ್ಯಾಕರ್‌ಗಳು ಯತ್ನಿಸುತ್ತಿರುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ 'ಡೇಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್‌ ಇಂಡಿಯಾ' ವರ್ಷದ ಹಿಂದೆಯೇ ಎಚ್ಚರಿಕೆ ನೀಡಿತ್ತು. ಕೋವಿಡ್‌ ಮೊದಲನೇ ಅಲೆಯ ಸಂದರ್ಭದಲ್ಲಿಯೇ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳ ಆಸ್ಪತ್ರೆಗಳು ಸೈಬರ್‌ ದಾಳಿಯ ಭೀತಿಯನ್ನು ಎದುರಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com