ಬಳ್ಳಾರಿ: ಕಂದಾಯ ನಿರೀಕ್ಷಕ (Revenue inspector)ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ 10 ಮಂದಿ ಆರೋಪಿಗಳನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಮರಳು ಸಾಗಣೆ ದಂಧೆಯನ್ನು ಭೇದಿಸಿದ್ದ ದ್ವೇಷದಿಂದ 10 ಮಂದಿ ಆರೋಪಿಗಳ ಗುಂಪು ವೆಂಕಟಸ್ವಾಮಿಯವರ ಮನೆಯೊಳಗೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದರು. ಇದರಿಂದ ವೆಂಕಟಸ್ವಾಮಿಯವರಿಗೆ ಗಾಯವಾಗಿದ್ದಲ್ಲದೆ ಅವರ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆಯನ್ನು ಕೂಡ ಹಾಕಿದ್ದರು.
ಈ ಬಗ್ಗೆ ವೆಂಕಟಸ್ವಾಮಿಯವರು ಬಳ್ಳಾರಿಯ ಬ್ರೂಸ್ ಪೇಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ 24 ಗಂಟೆಯೊಳಗೆ 8 ಜನ ಆರೋಪಿಗಳನ್ನು ಮತ್ತು ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬಳ್ಳಾರಿ: ಮರಳು ಮಾಫಿಯಾ ತಂಡದಿಂದ ಕಂದಾಯ ನಿರೀಕ್ಷಕ-ಮತ್ತವರ ಕುಟುಂಬಸ್ಥರ ಮೇಲೆ ಹಲ್ಲೆ
ಬಳ್ಳಾರಿಯ ರೂಪನಗುಡಿ ಹೋಬಳಿಯಲ್ಲಿ 53 ವರ್ಷದ ಕಂದಾಯ ನಿರೀಕ್ಷಕ (Revenue inspector) ಹಾಗೂ ಗ್ರಾಮ ಲೆಕ್ಕಿಗನ (Village Accountant) ಮೇಲೆ 10 ಜನರ ತಂಡವೊಂದು ಮೊನ್ನೆ ಬುಧವಾರ ರಾತ್ರಿ ಹಲ್ಲೆ ನಡೆಸಿತ್ತು.
ಇತ್ತೀಚೆಗೆ ಮರಳನ್ನು ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಕ್ಕೆ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಹೆಚ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು.
Advertisement