ಯಲಹಂಕ ಬಳಿ ಸರ್ಕಾರಿ ಜಮೀನು ಅತಿಕ್ರಮಣ: ಸಿಎಂ ಆದೇಶದಂತೆ ತೆರವಿಗೆ ಬಿಬಿಎಂಪಿ ಮುಂದು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆದೇಶದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಅಧಿಕಾರಿಗಳು ಯಲಹಂಕ ಹೋಬಳಿಯ ಶ್ರೀನಿವಾಸಪುರ ಗ್ರಾಮದ ಸರ್ವೆ ನಂಬರ್ 15ರಲ್ಲಿ 2.21 ಎಕರೆ ಅತಿಕ್ರಮಣ ಭೂಮಿಯನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ(CM Basavaraja Bommai) ಆದೇಶದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಅಧಿಕಾರಿಗಳು ಯಲಹಂಕ ಹೋಬಳಿಯ ಶ್ರೀನಿವಾಸಪುರ ಗ್ರಾಮದ ಸರ್ವೆ ನಂಬರ್ 15ರಲ್ಲಿ 2.21 ಎಕರೆ ಅತಿಕ್ರಮಣ ಭೂಮಿಯನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಮಾಜಿ ಮೇಯರ್ ಎನ್ ಆರ್ ರಮೇಶ್ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಸಿಎಂ ಅತಿಕ್ರಮಣ ಭೂಮಿಯ ತೆರವು ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆ. ಗ್ರಾಮದ ಇದೇ ಸರ್ವೆ ನಂಬರ್ ನಲ್ಲಿ 7.20 ಎಕರೆ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು 2.21 ಎಕರೆ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ರಮೇಶ್ ದೂರು ನೀಡಿದ್ದರು. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡಿದ ಎನ್ ಆರ್ ರಮೇಶ್, ಬೆಂಗಳೂರು ನಗರದಿಂದ ವಿಧಾನ ಪರಿಷತ್ ಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಯೂಸಫ್ ಶರೀಫ್ ಅವರಿಗೆ ಒಂದು ಎಕರೆ ಜಮೀನನ್ನು ನೀಡಲು ಸಹಾಯ ಮಾಡಲು ತಹಶಿಲ್ದಾರ್ ಮತ್ತು ಕಂದಾಯ ಇನ್ಸ್ ಪೆಕ್ಟರ್ ತಪ್ಪಾಗಿ ಒಂದು ಎಕರೆ ಜಮೀನನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.

ಸರ್ವೆ ನಂಬರ್ 15ರಲ್ಲಿ 11.01 ಎಕರೆ ಭೂಮಿ ವಿಸ್ತೀರ್ಣವಿದೆ. 2007ರಲ್ಲಿ ಸರ್ಕಾರ 7.20 ಎಕರೆ ಜಮೀನು ಹರಾಜಿಗೆ ಅಧಿಸೂಚನೆ ಹೊರಡಿಸಿ 3.20 ಎಕರೆ ಜಮೀನನ್ನು ಪೂರ್ವ ಭಾಗದಲ್ಲಿ ಉಳಿಸಿಕೊಂಡಿತ್ತು. ಅಧಿಸೂಚನೆಯ ಕೊನೆಯ ದಿನಾಂಕ ಮುಗಿದ ನಂತರ, ಜಿಲ್ಲಾಧಿಕಾರಿಗಳು ಮತ್ತು ತಹಶಿಲ್ದಾರ್ ಮುಂದೆ ಯೂಸಫ್ ಶರೀಫ್ ವಿಶೇಷ ಮನವಿ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ಕೋರಿದ್ದರು.

ಆಗ ಜಿಲ್ಲಾಧಿಕಾರಿ ಅರ್ಜಿ ಸ್ವೀಕರಿಸಲು ನಿರಾಕರಿಸಿದರು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಮಂದಿ ಬಿಡ್ಡಿಂಗ್ ಗೆ ಮುಂದೆ ಬರದ ಕಾರಣ ತಮ್ಮ ಸಂಪರ್ಕ, ಪ್ರಭಾವ ಬಳಸಿಕೊಂಡು ಒಂದು ಎಕರೆ ಜಮೀನು ಪಡೆಯುವಲ್ಲಿ ಯೂಸಫ್ ಶರೀಫ್ ಯಶಸ್ವಿಯಾದರು. ಭೂಮಿಗೆ ನಿಗದಿತ ಹಣ ನೀಡುವಲ್ಲಿ ಕೂಡ ಯೂಸಫ್ ಶರೀಫ್ ಕಾನೂನು ಉಲ್ಲಂಘಿಸಿದ್ದಾರೆ. ಸರ್ಕಾರದ ಬೆಲೆಯನ್ನು ನಿಗದಿತ ಸಮಯಕ್ಕೆ ಪಾವತಿಸಲಿಲ್ಲ, ಕಂತಿನ ರೂಪದಲ್ಲಿ ಹಣವನ್ನು ನೀಡಿದ್ದರು. ಜಿಲ್ಲಾಧಿಕಾರಿಗಳು ಆಗ ಕ್ರಮ ಕೈಗೊಳ್ಳದೆ ತಹಶಿಲ್ದಾರ್ ಅವರ ಜೊತೆ ಸೇರಿ 5 ಸೇಲ್ಸ್ ಡೀಡ್ ಮಾಡಿ ಐದು ಕನ್ವರ್ಶನ್ ಆರ್ಡರ್ ಪಾಸ್ ಮಾಡಿದ್ದರು ಎಂದು ಎನ್ ಆರ್ ರಮೇಶ್ ಹೇಳುತ್ತಾರೆ.

2014ರಲ್ಲಿ ಇದೇ ಸರ್ವೆ ನಂಬರ್ ನಲ್ಲಿ 2.20 ಎಕರೆ ಭೂಮಿಯನ್ನು ಘನ ತ್ಯಾಜ್ಯ ನಿರ್ವಹಣೆ ಸಂಸ್ಕರಣಾ ಘಟಕ ಸ್ಥಾಪನೆಗೆ ಬಳಸಲು ಸರ್ಕಾರ, ಬಿಬಿಎಂಪಿ ಘೋಷಣೆ ಮಾಡಿತ್ತು. ಆದರೆ ಭೂಮಿಯನ್ನು ಘಟಕಕ್ಕೆ ಬಳಸದೆ ಅತಿಕ್ರಮಣ ಮಾಡಲಾಗಿತ್ತು. ಉಳಿದ 1.01 ಎಕರೆ ಭೂಮಿಯನ್ನು ಪ್ರದೇಶದ ರೆವೆನ್ಯು ಇನ್ಸ್ ಪೆಕ್ಟರ್ ಯೂಸಫ್ ಶರೀಫ್ ಗೆ ಸಹಾಯ ಮಾಡಲು ಸುಳ್ಳು ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು. ಅದರಲ್ಲಿ ಗ್ರಾಮಸ್ಥರು ಸರ್ಕಾರಕ್ಕೆ ಮತ್ತು ಶರೀಫ್ ಅವರಿಗೆ ಸ್ವಯಂಪ್ರೇರಿತವಾಗಿ ಜಮೀನು ನೀಡಿದ್ದಾರೆ ಎಂದು ಸುಳ್ಳು ಹೇಳಿದ್ದರು.

ಭೂಮಿಯ ಇಡೀ ಪ್ರಕ್ರಿಯೆ ಒಂದು ಹಗರಣವಾಗಿದ್ದು ಒಂದು ಎಕರೆ ಜಮೀನನ್ನು ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಆದೇಶ ಮಾಡಿದ್ದಾರೆ. 7.20 ಎಕರೆ ಜಮೀನಿನ ಮಾರಾಟ ಮತ್ತು ಸ್ವೀಕೃತಿಯ ಪ್ರಕ್ರಿಯೆ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ರಮೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com