ಮೆಟ್ರೋಗಾಗಿ ಭೂಮಿ: ಬೆಂಗಳೂರು ಮೆಟ್ರೋ ರೈಲು ವಿರುದ್ಧ ಆಲ್ ಸೆಂಟ್ಸ್ ಚರ್ಚ್ ಸದಸ್ಯರ ಪ್ರತಿಭಟನೆ
ಬೆಂಗಳೂರು: ಆಲ್ ಸೆಂಟ್ಸ್ ಚರ್ಟ್ ಗೆ ಸಂಬಂಧಿಸಿದ ಭೂಮಿ ಸ್ವಾಧೀನಪಡಿಸಿಕೊಳ್ಳುವ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನಿರ್ಧಾರದ ವಿರುದ್ಧ ಸತತ ಮೂರನೇ ದಿನವಾದ ಭಾನುವಾರವೂ ಪ್ರತಿಭಟನೆ ಮುಂದುವರೆಯಿತು.
ಕಾಳೇನಾ ಅಗ್ರಹಾರ- ಗೊಟ್ಟಿಗೆರೆ ಮಾರ್ಗದ ವೆಲ್ಲಾರ ಜಂಕ್ಷನ್ ನಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಸುಮಾರು 883 ಚದರ ಮೀಟರ್ ನಷ್ಟು ಚರ್ಚಿಗೆ ಸಂಬಂಧಿಸಿದ ಭೂಮಿಯನ್ನು ವಶಪಡಿಸಿಕೊಳ್ಳಲು ಬಿಎಂಆರ್ ಸಿಎಲ್ ನೋಟಿಸ್ ಹೊರಡಿಸಿದೆ.
ಚರ್ಚ್ ಆವರಣದಲ್ಲಿ ಸಂಜೆವರೆಗೂ ನಡೆದ ಪ್ರತಿಭಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಭೂಮಿ ಸ್ವಾಧೀನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೆಲ್ಲಾರ ಜಂಕ್ಷನ್ ಬಳಿಯ ಚರ್ಚಿಗೆ ಸಂಬಂಧಿಸಿದ ಭೂಮಿ ಸ್ವಾಧೀನಕ್ಕಾಗಿ ಬಿಎಂಆರ್ ಸಿಎಲ್ ನವೆಂಬರ್ 4 ರಂದು ಆದೇಶ ಹೊರಡಿಸಿದ್ದು, 152 ವರ್ಷಗಳ ಇತಿಹಾಸ ಹೊಂದಿರುವ ಚರ್ಚ್ ಗಳ ಸುರಕ್ಷತೆ ಬಗ್ಗೆ ಭಯ ಉಂಟಾಗಿದೆ ಎಂದು ಎಬಿನೇಜರ್ ಪ್ರೇಮ್ ಕುಮಾರ್ ಹೇಳಿದರು. ಬಿಎಂಆರ್ ಸಿಎಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.