ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್: ಓಮಿಕ್ರಾನ್ ಭೀತಿ, ಡಿಸಿ ಮಹತ್ವದ ಸಭೆ

ರಾಜ್ಯದಲ್ಲಿ ಕೊರೋನಾ ವೈರಸ್ ನೂತನ ರೂಪಾಂತರಿ ಓಮ್ರಿಕಾನ್ ಭೀತಿ ಮುಂದುವರೆದಿರುವಂತೆಯೇ ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ನೂತನ ರೂಪಾಂತರಿ ಓಮ್ರಿಕಾನ್ ಭೀತಿ ಮುಂದುವರೆದಿರುವಂತೆಯೇ ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ.

ಘಾನಾ ದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್​ ಬಂದಿದೆ. ಏರ್​ಪೋರ್ಟ್​ನಲ್ಲಿ ಆರ್​ಟಿಪಿಸಿಆರ್​ ಟೆಸ್ಟ್​ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಸೋಂಕಿತ ವ್ಯಕ್ತಿಯನ್ನು ಏರ್​ಪೋರ್ಟ ಸಿಬ್ಬಂದಿ ವೆನ್​ಲಾಕ್​ ಆಸ್ಪತ್ರೆಗೆ ದಾಖಲಿಸಿದ್ದು, ಪಾಸಿಟಿವ್​ ಬಂದ ಪ್ರಯಾಣಿಕನ ಗಂಟಲು ದ್ರವ ಬೆಂಗಳೂರಿಗೆ ರವಾನೆ ಮಾಡಲಾಗಿದೆ.  ಜೆನೋಮಿಕ್​ ಸೀಕ್ವೆನ್ಸಿಂಗ್​ಗಾಗಿ ಬೆಂಗಳೂರಿಗೆ ಸ್ಯಾಂಪಲ್ ರವಾನೆ ಮಾಡಲಾಗಿದೆ. ಜತೆಗೆ ಸೋಂಕಿತನ ಹತ್ತಿರದ ಸೀಟ್​ನಲ್ಲಿದ್ದ 27 ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ. 

ಡಿಸಿ ಮಹತ್ವದ ಸಭೆ
ಮಂಗಳೂರು ನಿಲ್ದಾಣಕ್ಕೆ ಬಂದ ಪ್ರಯಾಣಿಕನಿಗೆ ಕೊರೋನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ್ದಾರೆ. ಏರ್​ಪೋರ್ಟ್ ಮುಖ್ಯಸ್ಥರು, ಏರ್​ಪೋರ್ಟ್​ ಆರೋಗ್ಯಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಕೊವಿಡ್​ ನೋಡಲ್​ ಅಧಿಕಾರಿ ಹಾಗೂ ಅಪೋಲೊ ಲ್ಯಾಬ್​ ಮುಖ್ಯಸ್ಥರ ಜತೆ ಡಿಸಿ ಡಾ.ರಾಜೇಂದ್ರ ಸಭೆ ನಡೆಸಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣದಲ್ಲಿ ತಪಾಸಣೆ ಬಿಗಿಗೊಳಿಸುವಂತೆ ಡಿಸಿ ಸೂಚನೆ ನೀಡಿದ್ದಾರೆ.

ದೇಶದಲ್ಲಿ ಕೊರೋನಾ ಜೆತೆಗೆ ಒಮಿಕ್ರಾನ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇಶದ 11 ರಾಜ್ಯಗಳಿಗೆ ಒಮಿಕ್ರಾನ್​ ಹರಡಿದ್ದು ಒಟ್ಟು 101 ಪ್ರಕರಣಗಳು ಈವರೆಗೆ ದಾಖಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಒಮಿಕ್ರಾನ್​ ಸೋಂಕು ಇದೀಗ ಎಲ್ಲ ರಾಷ್ಟ್ರಗಳಿಗೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಇದೀಗ ಮಂಗಳೂರಿನ ವಿಮಾನ ನಿಲ್ದಾಣದಲ್ಲಿಯೂ ಬಿಗಿ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com