ಸಾಂಗ್ಲಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸಂಬಂಧದ ಬಿರುಕು ಹೆಚ್ಚಾಗುತ್ತಿದೆ. ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್ಗಳು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಅಂಗಡಿಗಳನ್ನು ಸಹ ಧ್ವಂಸಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಪರಿಣಾಮ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡಿಗರ ಹಾಗೂ ಕರ್ನಾಟಕದ ಆಸ್ತಿ ಪಾಸ್ತಿಮೇಲೆ ತಮ್ಮ ಕೋಪ ತೋರಿಸುತ್ತಿದ್ದಾರೆ.
ಮೀರಜ್ನಲ್ಲಿ ಸಿಟ್ಟಿಗೆದ್ದ ಶಿವಸೇನಾ ಸೈನಿಕರು ಬೀದಿಗಿಳಿದು ಕರ್ನಾಟಕ ರಾಜ್ಯದ ಬಸ್ ಹಾಗೂ ಖಾಸಗಿ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕನ್ನಡಿಗರ ಮೇಲೆ ಎಮ್ಇಎಸ್ ಉದ್ಧಟತನ ಪ್ರದರ್ಶಿಸಿದ್ದು, ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದೆ.
ಇಷ್ಟೇ ಅಲ್ಲದೆ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಇರುವ ಕನ್ನಡ ಬೋರ್ಡ್ಗಳಿಗೆ ಮಸಿ ಬಳಿದಿದ್ದಾರೆ. ಹಿಂಸಾಚಾರಕ್ಕೆ ಇಳಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಗಡಿಭಾಗದಲ್ಲಿ ಭಾರೀ ಉದ್ಧಟತನ ಪ್ರದರ್ಶಿಸಿದ್ದಾರೆ.
ಗಡಿಭಾಗದವರೆಗೆ ಮಾತ್ರ ಬಸ್ ಸೌಲಭ್ಯ
ಬೆಳಗಾವಿ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವಾಗಲೇ ಅತ್ತ ಮಹಾರಾಷ್ಟ್ರದಲ್ಲೂ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳುವ ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳು ಗಡಿಭಾಗದವರೆಗೆ ಮಾತ್ರ ಚಲಿಸುತ್ತಿವೆ. ಅತ್ತ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಬಸ್ಸುಗಳು ಸಹ ಅತ್ತಲಿನ ಗಡಿಭಾಗದವರೆಗೂ ಮಾತ್ರ ಬಂದು ಹಿಂದಿರುಗುತ್ತಿವೆ. ಪರಿಸ್ಥಿತಿ ಬಿಗು ಗೊಂಡಿರುವುದರ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ರಾಜ್ಯದ ಸಾರಿಗೆ ಸಂಸ್ಥೆ ಬಸ್ಸುಗಳು ಗಡಿಭಾಗ ನಿಪ್ಪಾಣಿ ತನಕ ಹೋಗಿ ಬರುತ್ತಿವೆ. ಅಲ್ಲಿನ ಅಧಿಕಾರಿಗಳು ಕೂಡ ಇದೇ ಕ್ರಮ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ಗಮನಿಸುತ್ತಿದ್ದೇವೆ. ಮತ್ತೆ ಮಾಮೂಲು ಸ್ಥಿತಿಗೆ ಬಂದ ನಂತರ ಎಂದಿನಂತೆ ಬಸ್ಸುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಹೆಚ್ಚುಮಂದಿ ಸೇರುವಂತಿಲ್ಲ. ನಗರದ ಮೀಸಲು ಪೊಲೀಸರು ಸೇರಿದಂತೆ ಅಧಿವೇಶನದ ಬಂದೋಬಸ್ತ್ ಗಾಗಿ ಬಂದಿರುವ ಪೊಲೀಸ್ ಪಡೆಯನ್ನು ಶಾಂತಿ ಸುವ್ಯವಸ್ಥೆ ನಿರ್ವಹಣೆ ಮಾಡಲು ನಿಯೋಜಿಸಲಾಗಿದೆ.
Advertisement