ಸರ್ಕಾರದ ಆಡಳಿತ ಮತ್ತು ಅಭಿವೃದ್ಧಿ ಕೆಲಸ ಕುರಿತು ಇಂದು ಸಿಎಂ ನೇತೃತ್ವದಲ್ಲಿ ಸಭೆ: ನಾಳೆ ಬಂದ್ ಹಿಂಪಡೆಯುವಂತೆ ಮನವಿ
ಪ್ರತ್ಯೇಕವಾಗಿ ಸಿಇಒ (ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು) ಮತ್ತು ಡಿಸಿ (ಜಿಲ್ಲಾಧಿಕಾರಿಗಳ) ಸಭೆಯನ್ನು ನಡೆಸುತ್ತಿದ್ದೇನೆ. ಸರ್ಕಾರದ ಆಡಳಿತ ಮತ್ತು ಅಭಿವೃದ್ಧಿ ಕುರಿತು ಇಂದು ಸಿಇಒಗಳ ವ್ಯಾಪ್ತಿಯಲ್ಲಿ ಬರುವ ವಿಷಯಗಳನ್ನು ಚರ್ಚೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 30th December 2021 10:45 AM | Last Updated: 30th December 2021 01:06 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಪ್ರತ್ಯೇಕವಾಗಿ ಸಿಇಒ (ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು) ಮತ್ತು ಡಿಸಿ (ಜಿಲ್ಲಾಧಿಕಾರಿಗಳ) ಸಭೆಯನ್ನು ನಡೆಸುತ್ತಿದ್ದೇನೆ. ಸರ್ಕಾರದ ಆಡಳಿತ ಮತ್ತು ಅಭಿವೃದ್ಧಿ ಕುರಿತು ಇಂದು ಸಿಇಒಗಳ ವ್ಯಾಪ್ತಿಯಲ್ಲಿ ಬರುವ ವಿಷಯಗಳನ್ನು ಚರ್ಚೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತ್ಯೇಕವಾಗಿ ಸರ್ಕಾರದ ಆಡಳಿತ ಮತ್ತು ಅಭಿವೃದ್ಧಿ ಕುರಿತು ಚರ್ಚೆ ಮಾಡಬೇಕೆಂಬ ವಿಮರ್ಶೆ ನಡೆಯುತ್ತಿದೆ. ಯಾವ್ಯಾವ ಯೋಜನೆಗಳಲ್ಲಿ ಎಷ್ಟು ಸಾಧನೆಯಾಗಿದೆ, ಆಗಿಲ್ಲ ಎಂಬ ಬಗ್ಗೆ ಪರಾಮರ್ಶೆ ಮಾಡಿಕೊಂಡು ಬರಬೇಕೆಂದು ನಾವು ಸಿಇಒಗಳಿಗೆ ಸೂಚನೆ ನೀಡಿದ್ದೇವೆ. ಎಲ್ಲವೂ ಮಾದರಿಯನ್ನು ನೀಡಲಾಗಿದ್ದು, ನಿಖರತೆ ಆಧಾರದ ಮೇಲೆ ಸಾಮಾನ್ಯ ವಿಮರ್ಶೆ ನಡೆಯಲಿದೆ ಎಂದರು.
ನಾಳೆ ಡಿಸಿ ಸಭೆ: ನಾಳೆ ಜಿಲ್ಲಾಧಿಕಾರಿಗಳ ಸಭೆ ಇರಲಿದ್ದು, ಹಲವಾರು ಆಡಳಿತ ಮತ್ತು ಅಬಿವೃದ್ಧಿ ವಿಚಾರಗಳ ವಿವರವಾದ ಪರಾಮರ್ಶೆ ನಡೆಸಲಿದ್ದೇವೆ. ನನ್ನ ದೃಷ್ಟಿಯಲ್ಲಿ ಈ ವರ್ಷ ಕೊನೆಯ ಘಟ್ಟ ಬಹಳ ಮುಖ್ಯವಾದದ್ದು. ಇದುವರೆಗೆ ಮಾಡಿರುವ ಕೆಲಸಗಳು, ಮುಂದೆ ಆದ್ಯತೆ ಮೇರೆಗೆ ಮಾರ್ಚ್ ವರೆಗೆ ಮಾಡಬೇಕಾಗಿರುವ ಕೆಲಸಗಳು, ಕಾರ್ಯಗತವಾಗಬೇಕಿರುವ ಯೋಜನೆಗಳಿಗೆ ಪರಾಮರ್ಶೆ ನಡೆಸಿ ಪ್ರಮುಖ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಬಂದ್ ನಿಂದ ಹಿಂದೆ ಸರಿಯಲು ಮನವಿ: ಬೆಳಗಾವಿ ಗಡಿ ತಂಟೆ ವಿಚಾರದಲ್ಲಿ ಎಂಇಎಸ್ ಬಗ್ಗೆ ತೆಗೆದುಕೊಳ್ಳಬೇಕಾಗಿರುವ ತೀರ್ಮಾನವನ್ನು ನಾವು ಆದಷ್ಟು ಶೀಘ್ರದಲ್ಲಿಯೇ ತೆಗೆದುಕೊಳ್ಳುತ್ತೇವೆ. ರಾಜ್ಯದ ಜನತೆ ಹಿತದೃಷ್ಟಿಯಿಂದ, ಜನಸಾಮಾನ್ಯರ ಹಿತದಿಂದ ನಾಳೆ ಕನ್ನಡಪರ ಸಂಘಟನೆಗಳು ನಡೆಸಲುದ್ದೇಶಿಸಿರುವ ಬಂದ್ ನಿಂದ ಹಿಂದೆ ಸರಿಯಿರಿ ಎಂದು ವಾಟಾಳ್ ನಾಗರಾಜ್ ಅವರನ್ನು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಿಎಂ ಮನವಿ ಮಾಡಿಕೊಂಡರು.
ಕನ್ನಡ ವಿರೋಧಿ ನಿಲುವುಗಳಿಗೆ ಸರ್ಕಾರ ಈಗಾಗಲೇ ಕೆಲವು ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಕೂಡ ಕನ್ನಡಿಗರು, ಕನ್ನಡದ ಪರವಾಗಿ ಸರ್ಕಾರವಿರುತ್ತದೆ, ಆದುದರಿಂದ ಜನರ ಆರ್ಥಿಕ ಹಿತದೃಷ್ಟಿಯಿಂದ ಬಂದ್ ನಿಂದ ಹಿಂದೆ ಸರಿಯಬೇಕೆಂದು ಮನವಿ ಮಾಡಿಕೊಂಡರು.