ಕೃಷಿಕ್ಷೇತ್ರಕ್ಕೆ ನಿರೀಕ್ಷೆಗೆ ತಕ್ಕಂತಹ ಬಜೆಟ್ ಮಂಡನೆ ಆಗಿಲ್ಲ: ರೈತ ಮುಖಂಡರ ಅಸಮಾಧಾನ
ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಯಾವುದೇ ಅನುಕೂಲವಿಲ್ಲ. ಕೇಂದ್ರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ರೈತಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published: 02nd February 2021 08:54 AM | Last Updated: 02nd February 2021 12:59 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಯಾವುದೇ ಅನುಕೂಲವಿಲ್ಲ. ಕೇಂದ್ರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ರೈತಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತು ಮಾತನಾಡಿದ ಅವರು, ರೈತರಿಗೆ ಬೆಂಬಲ ಬೆಲೆ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ, ಇದರ ಮಾನದಂಡಗಳೇ ಸರಿಯಿಲ್ಲ. ಮೊದಲು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸ್ ಪಡೆಯಬೇಕು ಎಂದು ಕಿಡಿಕಾರಿದ್ದಾರೆ.
ಈ ಹಿಂದೆಯೂ ರೈತರ ಆದಾಯ ದ್ವಿಗುಣ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಅಂತಹ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಇದೊಂದು ನಿರಾಶಾದಾಯಕ ಬಜೆಟ್. ರೈತಮುಖಂಡ ಕುರುಬೂರು ಶಾಂತಕುಮಾರ್ ಬೇಸರವ್ಯಕ್ತಪಡಿಸಿದ್ದಾರೆ.
ರೈತ ವಿರೋಧಿ ಮತ್ತು ಬಡ ವರ ವಿರೋಧಿ ಬಜೆಟ್ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬಣ್ಣಿಸಿದರು. ರೈತರಿಗೆ ಮತ್ತು ಅವರ ಕಲ್ಯಾಣಕ್ಕೆ ನಿರ್ದಿಷ್ಟವಾದ ಯಾವುದೇ ಕಾರ್ಯಕ್ರಮಗಳಿಲ್ಲ, ರೈತರಿಗೆ ಎಂಎಸ್ಪಿಯನ್ನು ಖಾತರಿಪಡಿಸುವ ಮಸೂದೆಯನ್ನು ಸರ್ಕಾರ ಅಂಗೀಕರಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಎಂಎಸ್ಪಿ ಇಲ್ಲದಿದ್ದಾಗ, ಎಂಎಸ್ಪಿಗೆ ಹಣ ಹಂಚಿಕೆ ಮಾಡುವ ಕುರಿತು ಪ್ರಕಟಣೆ ಮಾಡುವುದರ ಅರ್ಥವೇನು? ಇದು ಜನರನ್ನು ದಾರಿ ತಪ್ಪಿಸುವ ಉದ್ದೇಶವನ್ನು ಹೊಂದಿದೆ. ಅವರು ಅಂತಹ ತಂತ್ರಗಳನ್ನು ಆಶ್ರಯಿಸಬಾರದು. ಬದಲಿಗೆ ಸ್ವಾಮಿನಾಥನ್ ವರದಿಯ ಪ್ರಕಾರ ಎಂಎಸ್ಪಿ ಒದಗಿಸಲು ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
"ಪಂಜಾಬ್ ಸರ್ಕಾರವು ಎಂಎಸ್ಪಿಗಿಂತ ಕಡಿಮೆ ಕೃಷಿ ಉತ್ಪನ್ನಗಳನ್ನು ಖರೀದಿಸುವುದು ಅಪರಾಧವಾಗುವಂತೆ ಒಂದು ಕಾಯ್ದೆಯನ್ನು ತಂದಿದೆ. ಇದರ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಏನು? ಅವರೂ ಸಹ ಅಂತಹ ಕಾನೂನನ್ನು ತರಲಿ ”ಎಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಪಂಜಾಬ್ ಸರ್ಕಾರವು ಎಂಎಸ್ಪಿಗಿಂತ ಕಡಿಮೆ ಕೃಷಿ ಉತ್ಪನ್ನಗಳನ್ನು ಖರೀದಿಸುವುದು ಅಪರಾಧವಾಗುವಂತೆ ಒಂದು ಕಾಯ್ದೆಯನ್ನು ತಂದಿದೆ. ಇದರ ಬಗ್ಗೆ ಭಾರತ ಸರ್ಕಾರದ ನಿಲುವು ಏನು? ಅವರೂ ಸಹ ಅಂತಹ ಕಾನೂನನ್ನು ತರಲಿ ”ಎಂದು ಅವರು ಹೇಳಿದರು.