ವಿಧಿವಿಜ್ಞಾನ ಪ್ರಯೋಗಾಲಯದಲ್ಲಿನ ವ್ಯವಸ್ಥೆ ಕೊರತೆಯು ನ್ಯಾಯ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ: ಹೈಕೋರ್ಟ್
ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದ್ದು, ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆ ಹಾಗೂ ಆರೋಪಿಗಳ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
Published: 11th February 2021 01:07 PM | Last Updated: 11th February 2021 01:27 PM | A+A A-

ಹೈಕೋರ್ಟ್
ಬೆಂಗಳೂರು: ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದ್ದು, ಇದು ಕ್ರಿಮಿನಲ್ ನ್ಯಾಯ ವ್ಯವಸ್ಥೆ ಹಾಗೂ ಆರೋಪಿಗಳ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಎಫ್ಎಸ್ಎಲ್ ವರದಿಗಳು ಬರುವುದು ವಿಳಂಬವಾಗುತ್ತಿರುವುದನ್ನು ಏಕ ಸದಸ್ಯ ಪೀಠ ಅವಲೋಕಿಸಿತ್ತು. ಇದನ್ನು ಆಧರಿಸಿ ಸ್ವಯಂ ಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ದಾಖಲಿಸಿದೆ.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ರಾಜ್ಯದ ಎಲ್ಲ ವಲಯಗಳ ಐಜಿಪಿಗಳು, ಕಮಿಷನರ್ಗಳು, ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರು ಮತ್ತು ಎಲ್ಲಾ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಿತು.
ಇದೇ ವೇಳೆ ರಾಜ್ಯದಲ್ಲಿರುವ 6 ವಿಧಿ ವಿಜ್ಞಾನ ಪ್ರಯೋಗಲಾಯ ಜೊತೆಗೆ ಅಗತ್ಯ ಸಂಖ್ಯೆಯ ಪ್ರಯೋಗಾಲಯಗಳನ್ನು ಸ್ಥಾಪಿಸುವ, ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು ಮಾರ್ಚ್ 15ರೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಿಗೆ ನ್ಯಾಯಪೀಠ ಸೂಚಿಸಿತು.
ಕ್ರಿಮಿನಲ್ ಅರ್ಜಿಯೊಂದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ 2020ರ ಡಿಸೆಂರ್ಬ 22ರಂದು ನೀಡಿದ್ದ ಆದೇಶದಲ್ಲಿ ರಾಜ್ಯದಲ್ಲಿರುವ ಎಫ್ಎಸ್ಎಲ್ಗಳು ನಿಗದಿತ ಅವಧಿಯಲ್ಲಿ ವರದಿ ನೀಡದಿರುವ ಕಾರಣದಿಂದಾಗಿ ಕ್ರಿಮಿನಲ್ ಪ್ರಕರಣಗಳ ನ್ಯಾಯದಾನ ಪ್ರಕ್ರಿಯೆಗೆ ಸಮಸ್ಯೆಯಾಗುತ್ತಿರುವ ಕುರಿತು ಉಲ್ಲೇಖಿಸಿತ್ತು. ಅಲ್ಲದೇ, ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರುವಂತೆ ರಿಜಿಸ್ಟ್ರಾರ್ಗೆ ಮನವಿ ಮಾಡಿತ್ತು. ಅದರಂತೆ ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಹೈಕೋರ್ಟ್ ಎಫ್ಎಸ್ಎಲ್ ಲ್ಯಾಬ್ಗಳ ಕೊರತೆ ವಿಚಾರವಾಗಿ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡಿದೆ.
ಬೆಂಗಳೂರಿನ ಮಡಿವಾಳದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಕೇಂದ್ರ ಕಚೇರಿಯಿದ್ದು, ದಾವಣಗೆರೆ, ಬೆಳಗಾವಿ, ಕಲಬುರ್ಗಿ, ಮಂಗಳೂರು ಹಾಗೂ ಮೈಸೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು ಆರು ಲ್ಯಾಬ್ ಗಳಿವೆ.
ಇವುಗಳಲ್ಲಿ ಡಿಎನ್ಎ, ನಾರ್ಕೋಟಿಕ್ಸ್, ಫೈರ್ ಆಮ್ಸ್ ದಾಖಲೆಗಳ ಪರೀಕ್ಷಾ ವಿಭಾಗ ಸೇರಿದಂತೆ 13 ವಿಭಾಗಗಳಿದ್ದು, ಅಗತ್ಯ ಸಂದರ್ಭಗಳಲ್ಲಿ ತಮ್ಮಲ್ಲಿಗೆ ಬರುವ ಸ್ಯಾಂಪಲ್ ಗಳನ್ನು ಪರೀಕ್ಷಿಸಿ ವರದಿ ನೀಡುತ್ತವೆ. ಆದರೆ, ಈ ಲ್ಯಾಬ್ ಗಳಲ್ಲಿ ಸಿಬ್ಬಂದಿ ಹಾಗೂ ಸೌಕರ್ಯಗಳ ಕೊರತೆಯಿಂದಾಗಿ 11 ವಿಭಾಗಗಳು ಕೆಲಸವನ್ನೇ ಮಾಡುತ್ತಿಲ್ಲ.
ರಾಜ್ಯದ ಎಲ್ಲ ಲ್ಯಾಬ್ ಗಳಲ್ಲಿ 35,738 ಸ್ಯಾಂಪಲ್ಗಳು ಪರೀಕ್ಷೆಗೊಳಪಡದೆ ಬಾಕಿ ಉಳಿದಿರುವ ಪರಿಣಾಮ 6994 ಕ್ರಿಮಿನಲ್ ಪ್ರಕರಣಗಳ ವಿಚಾರಣೆಯೂ ವಿಳಂಬವಾಗಿದೆ.
ಸ್ಯಾಂಪಲ್ಗಳು ಬಂದಾಗ ವರದಿ ಕೊಡಲಿಕ್ಕೆ ಲ್ಯಾಬ್ಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ನ್ಯಾರ್ಕೋಟಿಕ್ಸ್ಗೆ ಒಂದು ವರ್ಷ, ಮೊಬೈಲ್, ಕಂಪ್ಯೂಟರ್, ಆಡಿಯೋ, ವೀಡಿಯೋ, ಡಿಎನ್ಎ ಹಾಗೂ ದಾಖಲೆಗಳನ್ನು ಪರೀಕ್ಷಿಸಿ ವರದಿ ನೀಡಲು ಸುಮಾರು ಒಂದೂವರೆ ವರ್ಷ ತೆಗೆದುಕೊಳ್ಳುತ್ತಿವೆ.
ಇದು ಕ್ರಿಮಿನಲ್ ಪ್ರಕರಣಗಳ ನ್ಯಾಯದಾನ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.