ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆ ಸ್ಥಾಪನೆ: ಗೃಹ ಸಚಿವ ಬೊಮ್ಮಾಯಿ
ಮುಂದಿನ ಕೆಲ ತಿಂಗಳಲ್ಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆ ಮಾಡಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 21st February 2021 08:24 AM | Last Updated: 21st February 2021 08:24 AM | A+A A-

ಬಸವರಾಜ್ ಬೊಮ್ಮಾಯಿ
ಉಡುಪಿ: ಮುಂದಿನ ಕೆಲ ತಿಂಗಳಲ್ಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆ ಮಾಡಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಶನಿವಾರ ನೂತನ ಪೊಲೀಸ್ ವಸತಿ ಗೃಹ ಸಮುಚ್ಚಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ' ಕಾರ್ಕಳ ಮುಂದಿನ 3 ವರ್ಷಗಳ ಅವಧಿಯಲ್ಲಿ ಒಟ್ಟು 16 ಸಾವಿರ ಪೊಲೀಸ್ ಹುದ್ದೆಗಳ ಭರ್ತಿ, ಎಲ್ಲಾ ಜಿಲ್ಲೆಗಳಲ್ಲಿ ಸೈಬರ್ ಅಪರಾಧ ಮಟ್ಟ ಹಾಕಲು ಹೊಸ ಸೈಬರ್ ಠಾಣೆ ಸ್ಥಾಪಿಸುವುದಾಗಿ ಹೇಳಿದರು.
'ಈಗಾಗಲೇ 6 ಸಾವಿರ ಪೊಲೀಸ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮುಂದಿನ 3 ವರ್ಷಗಳ ಅವಧಿಯಲ್ಲಿ ಒಟ್ಟು 16 ಸಾವಿರ ಪೊಲೀಸ್ ಹುದ್ದೆ ಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಇದರಿಂದ ಪೊಲೀಸ್ ಬಲ ಮತ್ತಷ್ಟು ಹೆಚ್ಚಲಿದೆ. ಡಾರ್ಕ್ ವೆಬ್ ಮೂಲಕ ಜನರನ್ನು ಸಂಪರ್ಕಿಸಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಜಾಲವನ್ನು ದೇಶದಲ್ಲಿ ಮೊಟ್ಟ ಮೊದಲು ಮಟ್ಟ ಹಾಕಿದ್ದು ಕರ್ನಾಟಕ ಪೊಲೀಸ್. ಇದು ನಿಜಕ್ಕೂ ಹೆಮ್ಮೆಯ ವಿಷಯ. ನಾಲ್ಕು ವಿಧಿ ವಿಜ್ಙಾನ ಪ್ರಯೋಗಾಲಯ ಜೊತೆಗೆ ನಾಲ್ಕು ವಿಭಾಗಗಳಲ್ಲಿ ಒಂದೊಂದು ಅತ್ಯಂತ ಸುಸಜ್ಜಿತ ಎಫ್ ಎಸ್ ಎಲ್ ತನಿಖಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ರಾಜ್ಯದಲ್ಲಿ ಹೆಚ್ವುತ್ತಿರುವ ಸೈಬರ್ ಅಪರಾಧ ಮಟ್ಟ ಹಾಕಲಾಗುವುದು. ಅಂತೆಯೇ ಬೆಳಗಾವಿ, ಮೈಸೂರು, ಮಂಗಳೂರು, ಕಲಬುರಗಿ ವಿಭಾಗಗಳಲ್ಲಿ ತಲಾ ಒಂದು ಎಫ್ ಎಸ್ ಎಲ್ ಪ್ರಯೋಗಾಲಯ ಆರಂಭಿಸಲಾಗುವುದು ಎಂದು ಹೇಳಿದರು.
ಪೊಲೀಸ್ ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಬರುವ ಮಾ 31 ರೊಳಗಾಗಿ ವರದಿ ಸಲ್ಲಿಸಲಿದ್ದು . ಪೊಲೀಸ್ ವ್ಯವಸ್ಥೆ ಸುಧಾರಿಸಲು ಹಲವು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು. ಹತ್ತು ವರ್ಷಗಳ ಹಿಂದೆ ಸೈಬರ್ ಅಪರಾಧಗಳು ಇರಲಿಲ್ಲ.ಆದರೆ ಇತ್ತೀಚೆಗೆ ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ವುತ್ತಿವೆ. ಪೊಲೀಸ್ ಇಲಾಖೆಗೆ ಇದು ಹೊಸ ಸವಾಲು ಒಡ್ಡಿದೆ. ಈ ಅಪರಾಧ ಮಟ್ಟ ಹಾಕಲು ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಠಿ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆದೇಶಿಸಲಾಗಿದೆ ಎಂದೂ ಸಚಿವರು ಹೇಳಿದರು.