ದಕ್ಷಿಣ ಕನ್ನಡ: ಎದೆ ನಡುಗಿಸುವ ದೃಶ್ಯ; ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಾನು ಪ್ರಾಣಬಿಟ್ಟ ತಂದೆ, ವಿಡಿಯೋ ವೈರಲ್!
ಈಜುತ್ತಿದ್ದ ವೇಳೆ ನೀರು ಹೆಚ್ಚಾಗಿದ್ದರಿಂದ ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಂದೆಯೋರ್ವ ಪ್ರಾಣ ಬಿಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
Published: 04th January 2021 07:32 PM | Last Updated: 04th January 2021 07:32 PM | A+A A-

ಪ್ರತ್ಯಕ್ಷ ದೃಶ್ಯ
ದಕ್ಷಿಣ ಕನ್ನಡ: ಈಜುತ್ತಿದ್ದ ವೇಳೆ ನೀರು ಹೆಚ್ಚಾಗಿದ್ದರಿಂದ ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಂದೆಯೋರ್ವ ಪ್ರಾಣ ಬಿಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಡಿಸೆಂಬರ್ 31ರಂದು ಸಂಜೆ ಇಯರ್ ಎಂಡ್ ದಿನ. ಮೂವರು ಮಕ್ಕಳು ಮತ್ತು ತಂದೆ-ತಾಯಿ ಇರುವ ಐದು ಜನರ ಒಂದು ಕುಟುಂಬ ನೀರಿನಲ್ಲಿ ಮುಳುಗುತ್ತಿತ್ತು. ಈ ವೇಳೆ ಇದನ್ನು ಕಂಡ ದೋಣಿಯಲ್ಲಿದ್ದ ಯುವಕರು ಕೂಡಲೇ ಅಲ್ಲಿಗೆ ಧಾವಿಸಿ ಮೂವರು ಮಕ್ಕಳು ಮತ್ತು ಗೃಹಿಣಿಯನ್ನು ರಕ್ಷಿಸಿದ್ದಾರೆ.
ಆದರೆ ವಿಧಿವಶಾತ್ ಮಕ್ಕಳನ್ನು ನೀರಿನ ಮೇಲೆ ಹಿಡಿದುಕೊಂಡಿದ್ದ ಕಡಬ ಮೂಲದ ಜಯರಾಮಗೌಡ ಎಂಬುವರು ದುರ್ಮರಣ ಹೊಂದಿದ್ದಾರೆ. ಮೂವರು ಮಕ್ಕಳು ಮತ್ತು ಗೃಹಿಣಿಯನ್ನು ರಕ್ಷಿಸಿದ್ದ ಯುವಕರು ಕಷ್ಟಪಟ್ಟು ಜಯರಾಮಗೌಡರನ್ನು ದಡಕ್ಕೆ ಎಳೆದು ತಂದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಮಂಗಳೂರು ಹೊರವಲಯದ ಸಸಿಹಿತ್ಲು ಬಳಿ ಇರುವ ಕೆರಿಬಿಯನ್ ಸೀ ಹೋಮ್ ರೆಸಾರ್ಟ್ ಬಳಿ ಘಟನೆ ನಡೆದಿದೆ. ನದಿಗಳು ಸಮುದ್ರವನ್ನು ಸೇರುವ ಜಾಗದಲ್ಲಿ ಜಯರಾಮಗೌಡ ಕುಟುಂಬ ನೀರಿಗಿಳಿದಿತ್ತು. ಸರ್ಫರ್ ಕ್ಲಬ್ ನ ಶ್ಯಾಮ್ ಎಂಬಾತ ನಾಲ್ವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.