ಸಕ್ಕರೆ ಕಾರ್ಖಾನೆಯ ಧೂಳಿನ ಕಾಟಕ್ಕೆ ಬೇಸತ್ತು ಡಿವೈಎಸ್ಪಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಸಕ್ಕರೆ ಕಾರ್ಖಾನೆಯ ಹಾರು ಬೂದಿಯಿಂದ ಬೇಸತ್ತ ಗ್ರಾಮಸ್ಥನೊಬ್ಬ ಡಿವೈಎಸ್ಪಿ ಎದುರೇ ಆತ್ಮಹತ್ಯಗೆ ಯತ್ನಿಸಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ.
Published: 24th January 2021 08:28 AM | Last Updated: 24th January 2021 08:28 AM | A+A A-

ಸಂಗ್ರಹ ಚಿತ್ರ
ದಾವಣಗೆರೆ: ಸಕ್ಕರೆ ಕಾರ್ಖಾನೆಯ ಹಾರು ಬೂದಿಯಿಂದ ಬೇಸತ್ತ ಗ್ರಾಮಸ್ಥನೊಬ್ಬ ಡಿವೈಎಸ್ಪಿ ಎದುರೇ ಆತ್ಮಹತ್ಯಗೆ ಯತ್ನಿಸಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದಲ್ಲಿರುವ ಕಾರ್ಖಾನೆಯ ಧೂಳಿನ ಕಾಟಕ್ಕೆ ಬೇಸತ್ತು ರೈತ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ.
ಸ್ಥಳ ಪರಿಶೀಲನೆಗೆಂದು ಚಿಕ್ಕಬಿದರಿನಲ್ಲಿ ರೈತ ಹಾಲೇಶಪ್ಪ ಎಸಿ ಮಮತಾ ಹಾಗೂ ಡಿವೈಎಸ್ಪಿ ತಾಮ್ರಧ್ವಜ ತೆರಳಿದ್ದರು. ಈ ವೇಳೆ ಅಧಿಕಾರಿಗಳ ಸಮ್ಮುಖದಲ್ಲೇ ವ್ಯಕ್ತಿ ವಿಷ ಕುಡಿಯಲು ಯತ್ನಿಸಿದ್ದಾನೆ. ಆದರೆ, ಸಮಯಪ್ರಜ್ಞೆ ತೋರಿದ ಪೊಲೀಸರು ಆತನ ಕೈಯಲ್ಲಿದ್ದ ವಿಷದ ಬಾಟಲಿ ಕಸಿದುಕೊಂಡಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದಲ್ಲಿರುವ ಸಕ್ಕರೆ ಕಾರ್ಖಾನೆಯಿಂದ ಹೊರಬರುತ್ತಿದ್ದ ಹಾರು ಬೂದಿಯ ಉಪಟಳವನ್ನು ನಿಲ್ಲಿಸುವಂತೆ ಸ್ಥಳೀಯರು ಇಂದು ಗ್ರಾಮಕ್ಕೆ ಭೇಟಿ ನೀಡಿದ್ದ ಎಸಿ ಮಮತಾ ಮತ್ತು ಡಿವೈಎಸ್ಪಿ ತಾಮ್ರಧ್ವಜ ಅವರ ಬಳಿ ಮನವಿ ಮಾಡಿದರು.
ಹಾರು ಬೂದಿಯಿಂದ ಸುಮಾರು 20 ವರ್ಷಗಳ ಕಾಲ ನಲುಗಿ ಹೋಗಿದ್ದೇವೆ. ಅಧಿಕಾರಿಗಳು ಬರ್ತಾರೆ, ಹೋಗ್ತಾರೆ. ಆದರೆ, ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಗ್ರಾಮಸ್ಥರು ಗರಂ ಆದರು. ಇದಕ್ಕೆ, ಸ್ಪಂದಿಸಿದ ಅಧಿಕಾರಿಗಳು 20 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ನಡುವೆ, ರೈತ ಹಾಲೇಶಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ತಿಳಿದುಬಂದಿದೆ.